ಕರೀನಾ ಕಪೂರ್ (ಹಿಂದಿ:करीना कपूर) ಕರೀನಾ ಕಪೂರ್‌ ಎಂದು ಉಚ್ಚರಿಸಲಾಗುತ್ತದೆ; ೧೯೮೦ರ ಸೆಪ್ಟೆಂಬರ್‌ ೨೧ರಂದು ಜನನ),ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಭಾರತೀಯ ತಾರೆ. ಸಾಮಾನ್ಯವಾಗಿ ಬೇಬೋ ಎಂದು ಈಕೆಯನ್ನು ಕರೆಯುತ್ತಾರೆ. ತನ್ನ ವೃತ್ತಿ ಬದುಕಿನಲ್ಲಿ, ಕಪೂರ್‌ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಜೊತೆಗೆ ವಿವಿಧ ಸಿನಿಮಾ ಪ್ರಕಾರಗಳಲ್ಲಿ ಅಭಿನಯಿಸಿದ್ದಾಳೆ. ಸಮಕಾಲೀನ ಪ್ರಣಯ ಸಿನಿಮಾಗಳಿಂದ ಹಿಡಿದು ಹಾಸ್ಯ ಸಿನಿಮಾಗಳು, ನಿರ್ದಿಷ್ಟಅವಧಿ ಸಿನಿಮಾ(ಪೀರಿಯಡ್ ಫಿಲ್ಮ್‌)ಗಳಿಂದ ಪ್ರಮುಖ ಬಾಲಿವುಡ್ ಸಿನಿಮಾಗಳವರೆಗೆ ಮತ್ತು ಅಷ್ಟೇನೂ ಜನಪ್ರಿಯವಾಗದ ಸ್ವತಂತ್ರ ಸಿನಿಮಾಗಳೂ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಅವಳು ಹುಟ್ಟಿದ ಕುಟುಂಬದಲ್ಲಿ ತಂದೆ ರಣಧೀರ್‌ ಕಪೂರ್ ಮತ್ತು ತಾಯಿ ಬಬಿತಾ ಇಬ್ಬರೂ ಮತ್ತು ಅವಳ ಅಕ್ಕ ಕರಿಷ್ಮಾ ನಟ, ನಟಿಯರಾಗಿದ್ದು, ಕರೀನಾ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಾಧ್ಯಮದ ಪ್ರಚಾರ ಪಡೆದಿದ್ದಳು. ಆದರೆ ೨೦೦೦ದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ರೆಫ್ಯೂಜಿ ಯವರೆಗೆ ಬೆಳ್ಳಿತೆರೆಯಲ್ಲಿ ನಟಿಸಿರಲಿಲ್ಲ. ಅವಳ ಭಾವಪೂರಿತ ಸಿನಿಮಾ ಕಭಿ ಖುಷಿ ಕಭಿ ಗಮ್... ವಿದೇಶೀ ಮಾರುಕಟ್ಟೆಯಲ್ಲಿ ೨೦೦೧ರಲ್ಲಿ ಅತ್ಯಂತ ಹಣಗಳಿಕೆ ಮಾಡಿದ ಸಿನಿಮಾವಾಗಿತ್ತು ಮತ್ತು ಇಂದಿನವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾದ ಅವಳ ಸಿನಿಮಾ ಆಗಿದೆ. ಒಂದೇ ರೀತಿಯ ಪಾತ್ರಗಳನ್ನು ಒಂದಾದನಂತರ ಒಂದರಂತೆ ಮಾಡುತ್ತಿದ್ದಕ್ಕೆ ನಕಾರಾತ್ಮಕ ವಿಮರ್ಶೆ ಬಂದಿದ್ದರಿಂದ, ಕರೀನಾ ನಂತರ ಒಂದೇಮಾದರಿ(ಟೈಪ್‌ಕಾಸ್ಟ್‌) ಪಾತ್ರಗಳನ್ನು ತಪ್ಪಿಸಲು ಹೆಚ್ಚು ಸವಾಲೆನ್ನಿಸುವ ಪಾತ್ರಗಳನ್ನು ಸ್ವೀಕರಿಸತೊಡಗಿದಳು. ನಂತರ ನಟಿಯಾಗಿ ವೈವಿಧ್ಯಮಯ ಪಾತ್ರಗಳನ್ನು ಉತ್ತಮವಾಗಿ ಮಾಡಿದ್ದಕ್ಕಾಗಿ ವಿಮರ್ಶಕರಿಂದ ಗುರುತಿಸಲ್ಪಟ್ಟಳು. ಚಮೇಲಿ (೨೦೦೪) ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ ಕರೀನಾಗೆ ಆ ಸಿನಿಮಾ ವೃತ್ತಿಜೀವನದ ಮಹತ್ವದ ತಿರುವಾಗಿತ್ತು. ನಂತರ ಅವಳು ದೇವ್‌ (೨೦೦೪) ಮತ್ತು ಓಂಕಾರ (೨೦೦೬) ಸಿನಿಮಾಗಳ ನಟನೆಗೆ ಉತ್ತಮ ವಿಮರ್ಶೆ, ಪ್ರಶಂಸೆ ಗಳಿಸಿದಳು. ೨೦೦೭ರಲ್ಲಿ, ಕರೀನಾ ಜಬ್‌ ವಿ ಮೆಟ್‌ ಸಿನಿಮಾದ ಉತ್ತಮ ನಟನೆಗಾಗಿ ತನ್ನ ಮೊದಲ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದಳು, ಅದೊಂದು ಪ್ರಣಯ ಹಾಸ್ಯ ಸಿನಿಮಾ ಆಗಿದ್ದು, ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದರು. ನಂತರ ಅವಳು ಪ್ರಮುಖ ಸ್ತ್ರೀಪಾತ್ರದಲ್ಲಿ ನಟನೆಯನ್ನು ಮುಂದುವರೆಸಿದಳು, ಥ್ರಿಲ್ಲರ್ ಸಿನಿಮಾ ಕುರ್ಬಾನ್ (೨೦೦೯)ಗೆ ವಿಮರ್ಶಕರ ಪ್ರಶಂಸೆ ದೊರೆಯಿತು. ನಂತರ ೩ ಈಡಿಯೆಟ್ಸ್‌ ಸಿನಿಮಾ ಅತ್ಯಧಿಕ ಹಣಗಳಿಸಿದ ಸಾರ್ವಕಾಲಿಕ ಬಾಲಿವುಡ್ (೨೦೦೯) ಎಂದು ಖ್ಯಾತಿಪಡೆಯಿತು. ಇದರಲ್ಲಿ ನಟಿಸಿದ ನಂತರ, ಕರೀನಾ ಹಿಂದಿ ಸಿನಿಮಾ ಉದ್ಯಮದ ಪ್ರಮುಖ ತಾರೆಯರಲ್ಲಿ ಒಬ್ಬಳೆಂಬ ಸ್ಥಾನವನ್ನು ಸ್ಥಾಪಿಸಿಕೊಂಡಳು. ಸಿನಿಮಾದಲ್ಲಿ ನಟಿಸುವ ಜೊತೆಗೆ ಕರೀನಾ ನಿಯಮತವಾದ ಸ್ಟೇಜ್‌ ಪರ್‌ಫಾರ್ಮರ್‌ ಕೂಡ ಆಗಿದ್ದು, ಗ್ಲೋಬಸ್‌ ರಿಟೈಲ್‌ ಸರಣಿಗೆ ಬ್ರಾಂಡ್‌ ರಾಯಭಾರಿಯಾದ ಆದ ಅವಳು ತನ್ನದೇ ಉಡುಗೆಯ ಶ್ರೇಣಿಯನ್ನು ಆರಂಭಿಸಿದಳು. ಸೈಫ್‌ ಅಲಿ ಖಾನ್ ಜೊತೆಗಿನ ಸಂಬಂಧವೂ ಸೇರಿದಂತೆ ಅವಳ ಪರದೆ ಹಿಂದಿನ ಖಾಸಗಿ ಬದುಕು ಭಾರತದ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದ ವಿಷಯವಾಗಿದೆ. == ಆರಂಭಿಕ ಜೀವನ ಮತ್ತು ಹಿನ್ನೆಲೆ == ಭಾರತದ ಮುಂಬಯಿನಲ್ಲಿ ೧೯೮೦ರ ಸೆಪ್ಟೆಂಬರ್‌ ೨೧ರಂದು ಕಪೂರ್‌ ಸಿನಿಮಾ ಕುಟುಂಬದಲ್ಲಿ ಜನಿಸಿದ ಕರೀನಾ, ನಟ-ನಟಿಯರಾದ ರಣಧೀರ್‌ ಕಪೂರ್‌ ಮತ್ತು ಬಬಿತಾ (ಮೊದಲ ಹೆಸರು ಶಿವದಾಸನಿ) ಅವರ ಕಿರಿಯ ಮಗಳು; ಅವಳ ಅಕ್ಕ ಕರಿಷ್ಮಾ ಕಪೂರ್‌ ಕೂಡ ನಟಿ. ಅವಳು ನಟ ಮತ್ತು ಸಿನಿಮಾ ನಿರ್ಮಾಪಕ, ರಾಜ್‌ ಕಪೂರ್‌ನ ಮೊಮ್ಮಗಳು ಮತ್ತು ನಟ ಪೃಥ್ವಿರಾಜ್‌ ಕಪೂರ್‌ ಅವರ ಮರಿ-ಮೊಮ್ಮಗಳು ಮತ್ತು ಅವಳ ಚಿಕ್ಕಪ್ಪ ರಿಷಿ ಕಪೂರ್‌ ಕೂಡ ಉತ್ತಮ ನಟ. ಕರೀನಾಳ ಪ್ರಕಾರ, ಅವಳ ಹೆಸರು "ಕರೀನಾ" ಎನ್ನುವುದು ಅವಳ ತಾಯಿ ಗರ್ಭಿಣಿಯಾಗಿದ್ದಾಗ ಓದಿದ ಅನ್ನಾ ಕರೆನಿನಾ ಕೃತಿಯಿಂದ ಪ್ರೇರಣೆಗೊಂಡು ಇಟ್ಟ ಹೆಸರು. ಹೆಚ್ಚಾಗಿ ಮುದ್ದಿನಿಂದ ಬೇಬೋ ಎಂದು ಕರೆಯಲಾಗುವ ಆಕೆ ತಂದೆಯ ಕಡೆಯಿಂದ ಪಂಜಾಬಿ ಖಾತ್ರಿ ಕುಲದವಳು ಮತ್ತು ತಾಯಿಯ ಕಡೆಯಿಂದ ಸಿಂಧಿ. ಚಿಕ್ಕವಳಾಗಿದ್ದಾಗಿನಿಂದಲೂ, ಅವಳು ನಟಿಯಾಗುವ ಕುರಿತು ತೀವ್ರ ಅಪೇಕ್ಷೆ ಹೊಂದಿದ್ದಳು ಮತ್ತು ವಿಶೇಷವಾಗಿ ಬಾಲಿವುಡ್ ನಟಿಯರಾದ ನರ್ಗಿಸ್ ಮತ್ತು ಮೀನಾಕುಮಾರಿಯರ ಸಿನಿಮಾಗಳನ್ನು ನೋಡಿ ತುಂಬ ಸ್ಫೂರ್ತಿಗೊಂಡಿದ್ದಳು. ಕರೀನಾ ತನ್ನನ್ನು ತಾನು, "ತುಂಬ ತುಂಟಿ ಮತ್ತು ಮುದ್ದಿನಿಂದ ಹಾಳಾದ ಮಗು" ಎಂದು ವರ್ಣಿಸಿಕೊಳ್ಳುತ್ತಾಳೆ. ಅವಳು ಬಾಲ್ಯದಲ್ಲಿ ತಾಯಿಯ ಉಡುಗೆಗಳನ್ನು ತೊಟ್ಟುಕೊಂಡು, ಕನ್ನಡಿ ಮುಂದೆ ಅಭಿನಯಿಸುತ್ತಿದ್ದಳು. ಕೌಟುಂಬಿಕ ಹಿನ್ನೆಲೆಯಿದ್ದರೂ, ಅವಳ ತಂದೆ ತಮ್ಮ ಕುಟುಂಬದ ಮಹಿಳೆ ನಟನಾ ವೃತ್ತಿಗೆ ಪ್ರವೇಶಿಸುವುದನ್ನು ಇಷ್ಟಪಟ್ಟಿರಲಿಲ್ಲ. ಏಕೆಂದರೆ ಅದು ಸಾಂಪ್ರದಾಯಿಕವಾಗಿ ಕುಟುಂಬದಲ್ಲಿ ಮಹಿಳೆಯ ಮಾತೃ ಕರ್ತವ್ಯ ಮತ್ತು ಜವಾಬ್ದಾರಿಗೆ ತಡೆಯೊಡ್ಡುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇದು ಅವಳ ತಂದೆ, ತಾಯಿಯರ ನಡುವೆ ಬಿರುಕು ಮೂಡಲು ಕಾರಣವಾಯಿತು ಮತ್ತು ಬಬಿತಾ ಕೊನೆಗೆ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕಪೂರ್ ಮನೆಯನ್ನು ಬಿಟ್ಟು ಹೊರನಡೆದರು. ತಂದೆ, ತಾಯಿ ಪ್ರತ್ಯೇಕಗೊಂಡ ನಂತರ, ಆಕೆ ತನ್ನ ತಾಯಿಯೊಂದಿಗೆ ಲೋಖಂಡ್‌ವಾಲಾದಲ್ಲಿ ಬೆಳೆದಳು. ಕರಿಷ್ಮಾ ೧೯೯೧ರಲ್ಲಿ ತನ್ನ ಮೊದಲ ಸಿನಿಮಾ ಮಾಡುವವರೆಗೆ ಬಬಿತಾ ತನ್ನಿಬ್ಬರು ಹೆಣ್ಣುಮಕ್ಕಳನ್ನು ಬೆಳೆಸಲು ಹಲವಾರು ಕೆಲಸಗಳನ್ನು ಮಾಡಿದರು. ವೀರ್‌ ಸಾಂಘ್ವಿ ಜೊತೆಗಿನ ಒಂದು ಸಂದರ್ಶನದಲ್ಲಿ ಹೀಗೆ ಮಹಿಳೆಯರೇ ಇರುವ ಒಂದು ಮನೆಯಲ್ಲಿ ತಾನು ಬೆಳೆದಿದ್ದು ತನಗೆ ಹೆಚ್ಚು ಸಬಲಳು ಮತ್ತು ಸ್ವತಂತ್ರಳಾಗಲು ಸಹಾಯಕವಾಯಿತು ಎಂದು ಕರೀನಾ ಹೇಳಿಕೊಂಡಿದ್ದಾಳೆ. ೨೦೦೭ರ ಅಕ್ಟೋಬರ್‌ನಲ್ಲಿ ತಂದೆ, ತಾಯಿ ಪುನಾ ಒಂದಾದ ನಂತರ, "ಅವರೆಂದೂ ಅಧಿಕೃತವಾಗಿ ವಿಚ್ಛೇದನಗೊಂಡಿರಲಿಲ್ಲ, ಆದರೆ ಪ್ರತ್ಯೇಕವಾಗಿ ಬಾಳ್ವೆ ನಡೆಸಿದ್ದರು ಅಷ್ಟೆ" ಎಂದು ಕರೀನಾ ವಿವರಿಸಿದ್ದಳು. ಅವಳು ತಂದೆಯೊಂದಿಗೆ ಹಂಚಿಕೊಂಡಿದ್ದ ಬಾಂಧವ್ಯದ ಕುರಿತು ಆಕೆಗೆ ಕೇಳಿದಾಗ, "ನನ್ನ ತಂದೆ ನನ್ನ ಬದುಕಿನಲ್ಲಿ ಒಂದು ಬಹಳ ಪ್ರಮುಖವಾದ ಅಂಶ. ಆರಂಭದ ವರ್ಷಗಳಲ್ಲಿ ನಾನು ಅವರನ್ನು ಅಷ್ಟಾಗಿ ಭೇಟಿಯಾಗದಿದ್ದರೂ, ನಾವೀಗ ಒಂದೇ ಕುಟುಂಬವಾಗಿದ್ದೇವೆ" ಎಂದು ಹೇಳಿದ್ದಳು. ಕರೀನಾ ಮುಂಬಯಿನ ಜಮ್ನಾಬಾಯಿ ನಾರ್ಸಿ ಸ್ಕೂಲ್‌ನಲ್ಲಿ ಮೊದಲು ಕಲಿತು, ನಂತರ ಡೆಹ್ರಾಡೂನ್‌ನ ವೆಲ್ಹಾಮ್ ಗರ್ಲ್ಸ್ ಬೋರ್ಡಿಂಗ್‌ ಸ್ಕೂಲ್‌ಗೆ ಸೇರಿದಳು. "ನಾನು ವೆಲ್ಹಾಮ್‌ನಲ್ಲಿ ತುಂಬಾ ಕಲಿತೆ. ಅಲ್ಲಿಯ ನಾನು ಪಡೆದ ಅನುಭವವು ನನ್ನ ಬದುಕಿನಲ್ಲಿಯೇ ಅತ್ಯುತ್ತಮ ಭಾಗ" ಎಂದು ನೆನಪಿಸಿಕೊಂಡು, ವರ್ಣಿಸಿದ್ದಳು. ಕರೀನಾಳ ಪ್ರಕಾರ, ಅವಳು ಒಳ್ಳೆಯ ವಿದ್ಯಾರ್ಥಿಯಾಗಿದ್ದಳು ಮತ್ತು ಗಣಿತವೊಂದನ್ನು ಬಿಟ್ಟರೆ ಇನ್ನುಳಿದ ವಿಷಯಗಳಲ್ಲಿ ಮೊದಲ ದರ್ಜೆ ಗೌರವ ಪಡೆಯುತ್ತಿದ್ದಳು. ಬೋರ್ಡಿಂಗ್ ಶಾಲೆಯಲ್ಲಿ ಪದವಿ ಪಡೆದ ನಂತರ, ಅವಳು ಮುಂಬಯಿನ ವಿಲೆ ಪಾರ್ಲೆಯ ಮಿಥಿಬಾಯಿ ಕಾಲೇಜ್‌ನಲ್ಲಿ ಎರಡು ವರ್ಷ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿದಳು. ತಾನು ತನ್ನ ಕುಟುಂಬಕ್ಕೆ ತುಂಬ ಹತ್ತಿರದಲ್ಲಿ ಇದ್ದುದರಿಂದ ಅಲ್ಲಿಯೇ ಅಧ್ಯಯನ ಮಾಡಿದೆ ಎಂದು ತಿಳಿಸಿದ್ದಾಳೆ. ನಂತರ ಆಕೆಯು ಸಂಯುಕ್ತ ಸಂಸ್ಥಾನದ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಮೂರು ತಿಂಗಳು ಮೈಕ್ರೋಕಂಪ್ಯೂಟರ್‌ನಲ್ಲಿ ಬೇಸಿಗೆ ಕೋರ್ಸ್‌ ಮಾಡಿದಳು. ನಂತರ ಆಕೆ ಕಾನೂನು ವ್ಯಾಸಂಗದಲ್ಲಿ ಆಸಕ್ತಿ ಬೆಳೆಸಿಕೊಂಡಳು ಮತ್ತು ಚರ್ಚ್‌ ಗೇಟ್‌ನಲ್ಲಿರುವ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಹೆಸರು ನೋಂದಾಯಿಸಿದಳು; ಆ ಸಮಯದಲ್ಲಿ ಅವಳು ಕಾನೂನು ಪುಸ್ತಕಗಳ ಅಧ್ಯಯನದಲ್ಲಿ ತನ್ಮಯಳಾಗಿದ್ದಳು ಮತ್ತು ಓದುವ ನಿರಂತರ ಹವ್ಯಾಸವನ್ನು ಬೆಳೆಸಿಕೊಂಡಳು. ಆದರೆ ಚರ್ಚ್‌ಗೇಟ್ ಕಾಲೇಜಿನಲ್ಲಿ ಒಂದು ವರ್ಷ ಓದಿದ ನಂತರ ತನಗೆ ಶಿಕ್ಷಣದ ಕುರಿತು ಹೆಚ್ಚು ಒಲವಿಲ್ಲ ಎಂದು ಅವಳಿಗೆ ಅರಿವಾಯಿತು ಮತ್ತು ನಟಿಯಾಗುವ ತನ್ನ ಮೊದಲಿನ ಯೋಜನೆಗೇ ಮರಳಿದಳು. ಅಂಧೇರಿಯಲ್ಲಿರುವ ಒಂದು ನಟನಾ ಸಂಸ್ಥೆಯಲ್ಲಿ ಅವಳು ತರಬೇತಿ ಪಡೆಯಲಾರಂಭಿಸಿದಳು. ಅಲ್ಲಿ ಅವಳ ಆಸಕ್ತಿಯನ್ನು ಭಾರತದ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ (ಫಿಲ್ಮ್‌ ಆಂಡ್ ಟೆಲಿವಿಶನ್ ಇನ್‌ಸ್ಟಿಟ್ಯೂಟ್ ಆಪ್ ಇಂಡಿಯಾ)(ಎಫ್‌ಟಿಐಐ)ಯ ಸದಸ್ಯರಾದ ಕಿಶೋರ್‌ ನಮಿತ್ ಕಪೂರ್‌ ಪೋಷಿಸಿದರು. == ನಟನಾ ವೃತ್ತಿ ಬದುಕು == === ಮೊದಲ ಸಿನಿಮಾ ಮತ್ತು ಪ್ರಮುಖ ಪ್ರಗತಿ(೨೦೦೦–೦೩) === ಕರೀನಾ ಮೊದಲು ನಿರ್ದೇಶಕ ರಾಕೇಶ್‌ ರೋಶನ್‌ ಅವರ ಕಹೋನಾ... ಪ್ಯಾರ್‌ ಹೈ (೨೦೦೦) ಸಿನಿಮಾದಲ್ಲಿ ರೋಶನ್ ಅವರ ಮಗ ಹೃತಿಕ್ ರೋಶನ್ ಎದುರಾಗಿ ನಟಿಸಲು ಆಯ್ಕೆಯಾಗಿದ್ದಳು. ಕೆಲವು ದಿನಗಳು ಸಿನಿಮಾ ಶೂಟಿಂಗ್ ಆದ ನಂತರ, ಅವಳು ಆ ಸಿನಿಮಾದ ಯೋಜನೆಯನ್ನು ಕೈಬಿಟ್ಟಳು. ನಂತರ "ಪ್ರಾಯಶಃ ನಾನು ಆ ಸಿನಿಮಾದಲ್ಲಿ ನಟಿಸುವುದು ವಿಧಿಯಲ್ಲಿ ಇರಲಿಲ್ಲ. ಎಷ್ಟೇ ಆದರೂ ಆ ಸಿನಿಮಾ ಅವರ ಮಗನಿಗಾಗಿ ನಿರ್ಮಿಸಿದ್ದಾಗಿತ್ತು. ಸಿನಿಮಾದ ಇಡೀ ಗಮನ ಆ ಹುಡುಗನ ಮೇಲೇ ಇದ್ದಿತು. ನಾನು ಆ ಸಿನಿಮಾದಲ್ಲಿ ನಟಿಸಲಿಲ್ಲ ಎಂಬುದು ಈಗ ನನಗೆ ಸಂತೋಷವೆನ್ನಿಸುತ್ತದೆ" ಎಂದು ವಿವರಿಸಿದಳು. ಆ ವರ್ಷದ ಕೊನೆಯಲ್ಲಿ ಅವಳು ತನ್ನ ಮೊದಲ ಸಿನಿಮಾ ಜೆ.ಪಿ. ದತ್ತಾ ಅವರ ಯುದ್ಧರಂಗದ ಚಿತ್ರಕಥೆಯಿದ್ದ ರೆಫ್ಯೂಜಿ ಯಲ್ಲಿ, ಅಭಿಷೇಕ್ ಬಚ್ಚನ್‌‌‌ ಜೊತೆ ನಟಿಸಿದಳು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಕಥಾಹಂದರವಿದ್ದ ಆ ಸಿನಿಮಾವನ್ನು "ರೆಫ್ಯೂಜಿ" ಎಂದಷ್ಟೇ ಕರೆಯಲಾಗುತ್ತಿದ್ದ ವ್ಯಕ್ತಿಯೊಬ್ಬನ ಸುತ್ತ ಹೆಣೆಯಲಾಗಿತ್ತು. ಆತ ಭಾರತ-ಪಾಕಿಸ್ತಾನ ಗಡಿಯ ಆಚೆ-ಈಚೆಗೆ ಕಾನೂನುಬಾಹಿರವಾಗಿ ನಾಗರಿಕರನ್ನು ಸಾಗಿಸುತ್ತಿದ್ದ. ಈ ರೆಫ್ಯೂಜಿಯೊಂದಿಗೆ ಪ್ರೇಮದಲ್ಲಿ ಬೀಳುವ ಬಾಂಗ್ಲಾದೇಶದ ಹುಡುಗಿ ನಾಜ್‌ ಪಾತ್ರದಲ್ಲಿ ಕರೀನಾ ನಟಿಸಿದಳು, ಅವಳು ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಕಾನೂನುಬಾಹಿರವಾಗಿ ವಲಸೆ ಬಂದಿರುತ್ತಾಳೆ. ಅವಳ ನಟನೆಯನ್ನು ಚಿತ್ರವಿಮರ್ಶಕರು ಮೆಚ್ಚಿಕೊಂಡರು; ಬಾಲಿವುಡ್ ಹಂಗಾಮದ ತರಣ್ ಆದರ್ಶ್‌ ಕರೀನಾಳ ಬಗ್ಗೆ ಬರೆಯುತ್ತ, "ಪ್ರೇಕ್ಷಕರು ಅವಳನ್ನು ನೋಡುತ್ತಿರುವಂತೆಯೇ ಇಷ್ಟಪಡಲಾರಂಭಿಸುವಂತೆ ಅವಳು ಮನಸೂರೆಗೊಳ್ಳುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾಳೆ. ಅತ್ಯಂತ ಕಷ್ಟಕರ ಸನ್ನಿವೇಶಗಳನ್ನೂ ಆಕೆ ಎಷ್ಟು ಲೀಲಾಜಾಲವಾಗಿ ಅಭಿನಯಿಸುತ್ತಾಳೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ[...] ಕೆಮರಾ ಸ್ನೇಹಿಯಾಗಿರುವ ಅವಳು ಸಹಜ ನಟಿ ಎಂಬುದರಲ್ಲಿ ಎರಡು ಮಾತೇ ಇಲ್ಲ" ಎಂದು ಬರೆದಿದ್ದಾರೆ. ತನ್ನ ಮೊದಲ ಸಿನಿಮಾದ ಅನುಭವದ ಕುರಿತು ಮಾತನಾಡುತ್ತ ಆಕೆ, "ಕಠಿಣವಿತ್ತು... (ಆದರೆ) ಬಹಳ ಒಳ್ಳೆಯ ಕಲಿಕಾ ಅನುಭವ ಕೂಡ" ಎಂದು ವಿವರಿಸಿದ್ದಾಳೆ. ರೆಫ್ಯೂಜಿ ೨೦೦೦ರಲ್ಲಿ ಭಾರತದಲ್ಲಿ ಅತ್ಯಧಿಕ ಹಣಗಳಿಸಿದ ೫ನೇ ಸಿನಿಮಾ ಆಗಿತ್ತು, ಮತ್ತು ಕರೀನಾಳ ಅಭಿನಯ ಅವಳಿಗೆ ಫಿಲ್ಮ್‌ಫೇರ್‌ ಮೊದಲ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ೨೦೦೧ರಲ್ಲಿ, ಕರೀನಾಳು ತುಷಾರ್‌ ಕಪೂರ್‌ ಎದುರಾಗಿ ಮುಝೆ ಕುಚ್‌ ಕೆಹನಾ ಹೈ ಪ್ರಣಯಭರಿತ ಸಿನಿಮಾದಲ್ಲಿ ಅಭಿನಯಿಸಿದಳು ಮತ್ತು ಆ ವರ್ಷ ಅದು ಅತ್ಯಧಿಕ ಹಣಗಳಿಸಿದ ಸಿನಿಮಾ ಆಗಿತ್ತು. ಅವಳ ಅಭಿನಯದ ಕುರಿತು ದಿ ಹಿಂದೂ ಪತ್ರಿಕೆಯಲ್ಲಿ ಬಂದ ವಿಮರ್ಶೆಯೊಂದು, "ಕರೀನಾಳ ಮೊದಲ ಸಿನಿಮಾ ಅಭಿಷೇಕ್‌ ಜೊತೆಗಿನ ರೆಫ್ಯೂಜಿ ಮತ್ತು ಈಗ ಮುಜೆ ಕುಚ್‌ ಕೆಹನಾ ಹೈ ಸಿನಿಮಾಗಳಲ್ಲಿ ಆಕೆಯ ಅಭಿನಯ ಗಮನಿಸಿದರೆ, ನಿಶ್ಚಿತವಾಗಿಯೂ ಮುಂದೆ ಕಾದುನೋಡಬೇಕಿರುವ ನಟಿ [...] ಕರೀನಾ ತನ್ನ ಚೆಲುವು, ತುಂಬಿತುಳುಕುವ ಉತ್ಸಾಹದಿಂದ ಇಡೀ ಸಿನಿಮಾದಲ್ಲಿ ಮಿಂಚಿದ್ದಾಳೆ" ಎಂದು ಬರೆದಿತ್ತು. ಕರೀನಾ ನಂತರ ಸುಭಾಷ್‌ ಘಾಯ್‌ ಅವರ ಕೌಟುಂಬಿಕ ಸಿನಿಮಾ ಯಾದೇಂ ಯಲ್ಲಿ ಜಾಕಿ ಶ್ರಾಫ್‌ ಮತ್ತು ಹೃತಿಕ್ ರೋಶನ್‌ ಜೊತೆಗೆ ಮಾಡಿದಳು. ಸಿನಿಮಾವು ರಾಜ್‌ ಸಿಂಗ್ ಪುರಿ ಎಂಬ ಮಧ್ಯಮವರ್ಗದ ವ್ಯಕ್ತಿ ಮತ್ತು ಆತನ ಹೆಣ್ಣುಮಕ್ಕಳ ಮದುವೆಗಳ ಕುರಿತು ಕೇಂದ್ರಿತವಾಗಿತ್ತು. ಕರೀನಾ ಇದರಲ್ಲಿ ಕಿರಿಯ ಮಗಳು ಮತ್ತು ಹೃತಿಕ್ ರೋಶನ್‌ ಪ್ರೇಮಿಯಾಗಿದ್ದ ಇಶಾ ಸಿಂಗ್ ಪುರಿ ಪಾತ್ರ ಮಾಡಿದಳು. ಆದರೆ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ ಮತ್ತು ಗಲ್ಲಾಪೆಟ್ಟಿಗೆಯಲ್ಲಿಯೂ ಸೋತಿತು. ಕರೀನಾ ನಂತರ ಅಬ್ಬಾಸ್‌ ಮಸ್ತಾನ್‌ ಅವರ ಥ್ರಿಲ್ಲರ್ ಸಿನಿಮಾ ಅಜನಬೀ ಯಲ್ಲಿ ನಟಿಸಿದಳು. ಈ ಸಿನಿಮಾ ೧೯೯೨ರ ಅಮೆರಿಕನ್ ಥ್ರಿಲ್ಲರ್ ಸಿನಿಮಾ ಕನ್ಸೆಂಟಿಂಗ್ ಅಡಲ್ಟ್ಸ್ ನ ರೂಪಾಂತರವಾಗಿತ್ತು, ಮತ್ತು ಭಾರತದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸುಮಾರಾಗಿ ಯಶಸ್ವಿಯಾಯಿತು. ನಂತರದ ವರ್ಷ, ಅವಳು ಸಂತೋಷ್‌ ಶಿವನ್ ಅವರ ಕಾಲಘಟ್ಟದ ಸಿನಿಮಾ ಅಶೋಕ ಮಹಾರಾಜ (ಅಶೋಕ ದಿ ಗ್ರೇಟ್)ನ ಜೀವನದ ಕುರಿತು ಭಾಗಶಃ ಕಾಲ್ಪನಿಕವಾಗಿದ್ದ ಅಶೋಕ ದಲ್ಲಿ ನಟಿಸಿದಳು. ಇದನ್ನು ಬ್ರಿಟನ್ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ವ್ಯಾಪಕವಾಗಿ ಬಿಡುಗಡೆ ಮಾಡಲಾಯಿತು ಮತ್ತು ವೆನಿಸ್ ಫಿಲ್ಮ್‌ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೂ ಆಯ್ಕೆಯಾಗಿತ್ತು. ಜೊತೆಗೆ ೨೦೦೧ ಟೊರೆಂಟೋ ಇಂಟರ್‌ನ್ಯಾಶನಲ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿಯೂ ಪ್ರದರ್ಶಿತಗೊಂಡಿತು. ಅಶೋಕನ ಪಾತ್ರ ವಹಿಸಿದ್ದ ಶಾರುಕ್ ಖಾನ್ ಎದುರಾಗಿ ಕರೀನಾ ನಟಿಸಿದ್ದಳು. ರಾಜ ಅಶೋಕನು ಪ್ರೇಮಿಸುವ ಕಳಿಂಗದ ರಾಜಕುಮಾರಿ ಕೌರ್ವಕಿಯ ಪಾತ್ರವನ್ನು ಅಭಿನಯಿಸಿದ್ದಳು ಮತ್ತು ಮೊದಲಬಾರಿ ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. ಸಿನಿಮಾಗೆ ಉತ್ತಮ ಧನಾತ್ಮಕ ಪ್ರತಿಕ್ರಿಯೆ ಬಂದರೂ, ಕರೀನಾಳ ಅಭಿನಯ ಕುರಿತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಿಡಿಫ್.ಕಾಂ "ಮೊದಲರ್ಧ ಭಾಗವು ಓಡಿಹೋದ ರಾಜಕುಮಾರ ಮತ್ತು ಕರೀನಾಳ ಮಧ್ಯೆ ಪ್ರೇಮಾಂಕುರದ ಕುರಿತೇ ಹೆಚ್ಚು ಇದೆ, ಅವರಿಬ್ಬರ ಮಧ್ಯೆ ತೆರೆಯ ಮೇಲೆ ಉತ್ತಮ ಕೆಮಿಸ್ಟ್ರಿ ಇದೆ, ಆದರೆ ಕರೀನಾಳ ನಟನಾ ಸಾಮರ್ಥ್ಯದ ಕುರಿತು ಇನ್ನೂ ಅಷ್ಟು ಖಾತ್ರಿಯಾಗಿ ಹೇಳಲಾಗದು" ಎಂದು ನಿರ್ಣಯಿಸಿತ್ತು. ಇದೇವೇಳೆ, ವೆರೈಟಿ ಯ ಡೇವಿಡ್ ರೂನಿ, "ಕರೀನಾ ಸರ್ವಾಲಂಕೃತ ಕೌರ್ವಕಿಯ ಪಾತ್ರವನ್ನು ಬೆಡಗುಬಿನ್ಣಾಣ ಮತ್ತು ಯೋಧಮಹಿಳೆ, ಎರಡರ ಸಮ್ಮಿಶ್ರಣದಂತೆ ತುಂಬ ಚೆನ್ನಾಗಿ ಅಭಿನಯಿಸಿದ್ದಾಳೆ; ಒಂದರ್ಥದಲ್ಲಿ ಅವಳು ಜೆ.ಲೊ. ಮತ್ತು ಮಿಶೆಲ್‌ ಯೋಹ್‌ ಇಬ್ಬರ ಸಮ್ಮಿಶ್ರಣದಂತೆ ಕಾಣುತ್ತಾಳೆ" ಎಂದು ಬರೆದಿದ್ದರು. ೨೦೦೧ರ ಕೊನೆಯಲ್ಲಿ ಬಿಡುಗಡೆಯಾದ ಕರೀನಾಳ ಸಿನಿಮಾ ಕಭಿ ಖುಷಿ ಕಭಿ ಗಮ್‌... , ಭಾವಪೂರ್ಣ ಸಿನಿಮಾ ಆಗಿದ್ದು, ಅವಳು ಅದರಲ್ಲಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರುಕ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಶನ್‌ ಎಲ್ಲರೊಂದಿಗೆ ನಟಿಸಿದ್ದಳು. ಕರಣ್ ಜೋಹರ್ ನಿರ್ದೇಶಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮತ್ತು ವಿಮರ್ಶಾತ್ಮಕವಾಗಿಯೂ ಮಹತ್ವದ ಯಶಸ್ಸು ಗಳಿಸಿತ್ತು. ಆ ವರ್ಷ ಭಾರತದಲ್ಲಿ ಹೆಚ್ಚು ಹಣಗಳಿಸಿದ ಎರಡನೇ ಸಿನಿಮಾ ಆಗಿದ್ದು, ಕರೀನಾಳ ಆ ವರೆಗಿನ ಸಿನಿಮಾಗಳಲ್ಲಿಯೇ ಹೆಚ್ಚು ಹಣಮಾಡಿದ ಸಿನಿಮಾ ಆಯಿತು. ಅಂತರಾಷ್ಟ್ರೀಯವಾಗಿ ಕೂಡ ಆ ಸಿನಿಮಾ ಉತ್ತಮ ಯಶಸ್ಸು ಗಳಿಸಿತು ಮತ್ತು ಆ ವರೆಗಿನ ವಿದೇಶೀ ಮಾರುಕಟ್ಟೆಯಲ್ಲಿ ವಿಶ್ವಾದ್ಯಂತ ಅತ್ಯಂತ ಹೆಚ್ಚು ಹಣಗಳಿಸಿದ₹೧,೦೦೦ ದಶಲಕ್ಷ (ಯುಎಸ್$]೨೨.೨ ದಶಲಕ್ಷ) ಬಾಲಿವುಡ್ ಸಿನಿಮಾ ಆಯಿತು. ಉತ್ತಮ ಸ್ವಭಾವದ, ಆದರೆ ಪೊಳ್ಳುವ್ಯಕ್ತಿತ್ವದ ಹುಡುಗಿ "ಪೂ" ಪಾತ್ರದಲ್ಲಿ ಅಭಿನಯಿಸಿದ ಕರೀನಾಳ ನಟನೆ "ಚಿತ್ರದ ಒಂದು ಪ್ರಮುಖ ಹೈಲೈಟ್‌" ಎಂಬ ವರ್ಣನೆಗೆ ಪಾತ್ರವಾಯಿತು, ಮತ್ತು ಅವಳು ಈ ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕಿ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. ೨೦೦೨ ಮತ್ತು ೨೦೦೩ರಲ್ಲಿ ಕರೀನಾ ವೃತ್ತಿಬದುಕಿನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದಳು. ಅವಳು ಒಟ್ಟು ಆರು ಸಿನಿಮಾಗಳಲ್ಲಿ ನಟಿಸಿದ್ದಳು —ಮುಜ್‌ಸೆ ದೋಸ್ತಿ ಕರೋಗೆ! , ಜೀನಾ ಸಿರ್ಫ್‌ ಮೇರೇ ಲಿಯೆ , : ... , ಖುಷಿ , ಮೈ ಪ್ರೇಮ್‌ ಕಿ ದೀವಾನೀ ಹೂಂ , ಮತ್ತು ನಾಲ್ಕು ಗಂಟೆ ಅವಧಿಯ ಸುದೀರ್ಘ ಕಥನವುಳ್ಳ ಎಲ್‌ಒಸಿ ಕಾರ್ಗಿಲ್ —ಇವೆಲ್ಲವೂ ವಿಮರ್ಶಾತ್ಮಕವಾಗಿ ಮತ್ತು ಉದ್ಯಮದ ದೃಷ್ಟಿಯಿಂದ ಭಾರತದಲ್ಲಿ ಯಶಸ್ವಿಯಾಗಲಿಲ್ಲ. ಕರೀನಾಳ ಅಭಿನಯವನ್ನು ವಿಮರ್ಶಕರು ಸಹಜಾಭಿನಯವಲ್ಲ ಮತ್ತು ಪುನರಾವರ್ತಿತ ಪಾತ್ರಗಳು, ಸ್ಫೂರ್ತಿ ಹುಟ್ಟಿಸುವಂಥದ್ದಲ್ಲ ಎಂಬ ಗುರುತಿಸಿದರು. ಒಂದೇಬಗೆಯ ಪಾತ್ರಗಳಲ್ಲಿ ಟೈಪ್‌ಕಾಸ್ಟ್‌ ಆಗುತ್ತಿದ್ದಾಳೆ ಎಂಬ ಕಾಳಜಿ ವ್ಯಕ್ತಪಡಿಸಿದರು. ಆದರೆ ಈ ನಕಾರಾತ್ಮಕ ವಿಮರ್ಶೆಗಳು ಅವಳಿಗೆ ಮುಂದಿನ ವರ್ಷಗಳಲ್ಲಿ ಹೆಚ್ಚು ಸವಾಲಿನ ಪಾತ್ರಗಳನ್ನು ಸ್ವೀಕರಿಸುತ್ತ ನಟಿಯಾಗಿ ತನ್ನ ಅನನ್ಯತೆಯನ್ನು ಉತ್ತಮಪಡಿಸಿಕೊಳ್ಳಲು ಮೂಲಕಾರಣವಾಯಿತು. === ವಿರ್ಮಾತ್ಮಕ ಮ್ನನಣೆ(೨೦೦೪–೦೬) === ವೃತ್ತಿಬದುಕಿನ ಹಿನ್ನಡೆಯ ಅವಧಿಯ ನಂತರ, ಕರೀನಾ, ೨೦೦೪ರ ಆರಂಭವನ್ನು ಹೆಚ್ಚು ಗಂಭೀರ ಸಿನಿಮಾಗಳಲ್ಲಿ ಮಾಡುವ ಮೂಲಕ ಗುರುತಿಸಿಕೊಂಡಳು, ಇವುಗಳಲ್ಲಿ ಹೆಚ್ಚಿನ ಚಿತ್ರಗಳು ವಾಣಿಜ್ಯಕ ಯಶಸ್ಸಿಗಿಂತ ಹೆಚ್ಚು ಅವಳಿಗೆ ವಿಮರ್ಶಾತ್ಮಕ ಮನ್ನಣೆ ದೊರಕಿಸಿಕೊಟ್ಟವು. ಸುಧೀರ್ ಮಿಶ್ರಾ ಅವರ ನಿರ್ದೇಶನದಲ್ಲಿ, ಕರೀನಾ ವೇಶ್ಯೆ ಚಮೇಲಿ ಯ ಪಾತ್ರವನ್ನು ಅಭಿನಯಿಸಿದಳು. ಹರೆಯದ ವೇಶ್ಯೆಯೊಬ್ಬಳು ಹೂಡಿಕೆ ಬ್ಯಾಂಕರ್ ಆಗಿರುವ ವಿಧುರ (ರಾಹುಲ್‌ ಬೋಸ್ ಆ ಪಾತ್ರ ವಹಿಸಿದ್ದರು) ವ್ಯಕ್ತಿಯನ್ನು ಭೇಟಿಯಾಗುತ್ತಾಳೆ. ಅವರಿಬ್ಬರ ಮಧ್ಯೆ ಸಂಬಂಧ ಬೆಳೆದಂತೆ ಇಬ್ಬರೂ ತಮ್ಮ ಬದುಕಿನ ದುರಂತಮಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕರೀನಾಳಿಗೆ ಮೊದಲು ೨೦೦೨ರಲ್ಲಿ ಈ ಪಾತ್ರವನ್ನು ಮಾಡುವಂತೆ ಆಹ್ವಾನ ನೀಡಲಾಗಿತ್ತು, ಆದರೆ ತಾನು ವೃತ್ತಿ ಬದುಕಿನ ಆರಂಭದಲ್ಲಿಯೇ ಅಷ್ಟು ಎದೆಗಾರಿಕೆಯ (ಬೋಲ್ಡ್‌) ಪಾತ್ರವನ್ನು ಮಾಡಲಾರೆ ಎಂದು ಅವಳು ತಿರಸ್ಕರಿಸಿದ್ದಳು. ಆದರೆ ನಿರ್ದೇಶಕರು ಒಂದು ವರ್ಷದ ಬಳಿಕ ಪುನಾ ಮಾಡುವಂತೆ ಕೇಳಿಕೊಂಡಾಗ ಅವಳು ನಟಿಸಲು ಒಪ್ಪಿಕೊಂಡಳು ಮತ್ತು ತನ್ನ ನಟನಾ ಕೌಶಲವನ್ನು ಸಾಬೀತುಪಡಿಸಲು ಒಂದು ಅವಕಾಶ ಎಂದು ಭಾವಿಸಿದಳು. ಈ ಪಾತ್ರಕ್ಕೆ ಸಿದ್ಧಳಾಗಲು ಅವಳು ಮುಂಬಯಿನ ಹಲವಾರು ಕೆಂಪುದೀಪದ ಪ್ರದೇಶಗಳಿಗೆ ಲೈಂಗಿಕ ಕಾರ್ಯಕರ್ತೆಯರ ಉಡುಗೆತೊಡುಗೆ ಮತ್ತು ಅವರ ನಡವಳಿಕೆಯನ್ನು ಅಧ್ಯಯನ ಮಾಡಲು ರಾತ್ರಿ ಭೇಟಿ ನೀಡಿದಳು. ಚಮೇಲಿ ಸಿನಿಮಾ ಬಿಡುಗಡೆ ನಂತರ ಹೆಚ್ಚು ಧನಾತ್ಮಕ ವಿಮರ್ಶೆಯನ್ನು ಗಳಿಸಿತು. ಜೊತೆಗೆ ಕರೀನಾಳ ನಟನೆಯನ್ನು ವಿಮರ್ಶಕರು ಉತ್ತಮವಾಗಿ ಸ್ವೀಕರಿಸಿದರು. ಇಂಡಿಯಾಟೈಮ್ಸ್‌ ಪತ್ರಿಕೆಯು ಅವಳ ನಟನೆಯನ್ನು "ಅಂತಸ್ಫೂರ್ತಿಯ ಪ್ರತಿಭೆ" ಎಂದು ಹೊಗಳಿತು ಮತ್ತು ಆಕೆಯ ಅಭಿನಯ ಎಲ್ಲ ನಿರೀಕ್ಷೆಗಳನ್ನು ಮೀರಿದೆ ಎಂದು ಬರೆದಿತ್ತು. ಇನ್ನೋರ್ವ ವಿಮರ್ಶಕರು ಅವಳ ಪಾತ್ರಚಿತ್ರಣ ಅಷ್ಟೇನೂ ಮನವರಿಕೆಯಾಗುವಂಥದ್ದಲ್ಲ ಮತ್ತು ಹೆಚ್ಚು ರೂಢಮಾದರಿಯ ಹಾಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿ, "ತೀರಾ ಹದಿಹರೆಯದ ಹುಡುಗಿಯೊಬ್ಬಳು ದಾರ್ಷ್ಟ್ಯದ, ಗಟ್ಟಿನಿಲುವಿನ ಬೀದಿಹೆಂಗಸಿನ ಪಾತ್ರವನ್ನು ನಟಿಸಿದಂತಿದೆ", ಮತ್ತು ಅವಳ ಹಾವಭಾವಗಳು ನಿಕೃಷ್ಟ ಅನುಕರಣೆ(ಕ್ಯಾರಿಕೇಚರ್‌)ಯಂತಿದೆ ಎಂದು ವರ್ಣಿಸಿದ್ದರು. ಆದಾಗ್ಯೂ, ಕರೀನಾಳ ಚಮೇಲಿ ಪಾತ್ರದ ಅಭಿನಯವು ಅವಳಿಗೆ ಫಿಲ್ಮ್‌ಫೇರ್‌ ವಿಶೇಷ ಅಭಿನಯ ಪ್ರಶಸ್ತಿ (ಸ್ಪೆಶಲ್ ಪರ್‌ಫಾರ್ಮನ್ಸ್ ಅವಾರ್ಡ್‌)ಯನ್ನು ತಂದುಕೊಟ್ಟಿತು ಮತ್ತು ಈ ಸಿನಿಮಾವು ನಟಿಯಾಗಿ ಅವಳ ವೃತ್ತಿಬದುಕಿನಲ್ಲಿ ಮಹತ್ವದ ತಿರುವಿನ ಬಿಂದುವಾಯಿತು. ನಂತರ ಅವಳು ಮಣಿರತ್ನಂ ಅವರ ದ್ವಿಭಾಷಾ ಚಿತ್ರ ಯುವ ದಲ್ಲಿ ಅಜಯ್‌ ದೇವಗನ್, ಅಭಿಷೇಕ್ ಬಚ್ಚನ್‌‌‌, ವಿವೇಕ್ ಒಬೆರಾಯ್‌‌, ರಾಣಿ ಮುಖರ್ಜಿ ಮತ್ತು ಇಷಾ ಡಯೋಲ್‌‌ ಅವರೊಂದಿಗೆ ನಟಿಸಿದಳು. ಮೂರು ಭಾಗವನ್ನುಳ್ಳ ಸಿನಿಮಾವು ಆರು ವ್ಯಕ್ತಿಗಳು ಒಂದು ಕಾರ್‌ ಅಪಘಾತದಿಂದಾಗಿ ಪರಸ್ಪರ ಸಂಪರ್ಕಕ್ಕೆ ಬಂದ ಕಥೆಯನ್ನು ಚಿತ್ರಿಸಿದೆ. ಕರೀನಾಳು ಮೂರನೇ ಭಾಗದಲ್ಲಿ ಒಬೆರಾಯ್‌ನ ಪ್ರೇಮಿ, ತಿಳಿಹಾಸ್ಯದ ಉತ್ಸಾಹಿ ಯುವತಿ ಮೀರಾ ಆಗಿ ನಟಿಸಿದ್ದಳು. ಅಷ್ಟು ಕನಿಷ್ಠ ಪ್ರಾಮುಖ್ಯತೆ ಇರುವ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕಾಗಿ ಅವಳನ್ನು ಹೆಚ್ಚಾಗಿ ಟೀಕಿಸಲಾಯಿತು, ಆದರೂ ಜನ ಅವಳ ಅಭಿನಯವನ್ನು ಉತ್ತಮವಾಗಿ ಸ್ವೀಕರಿಸಿದರು. ಸುಭಾಷ್‌ ಕೆ ಝಾ ಅವಳ ಪಾತ್ರವನ್ನು 'ವಿಲಕ್ಷಣ ಮತ್ತು ಹುರುಳಿಲ್ಲದ ಪಾತ್ರ' ಎಂದು ವಿವರಿಸಿದ್ದರು. ಆದರೆ ಅವರು ಮತ್ತೆ "ಈ ಪಾತ್ರದ ಲಕ್ಷಣಗಳನ್ನು ಅವಳು ತನ್ನ ಸ್ವಂತ ಅನುಕೂಲಕ್ಕೆ ಪರಿವರ್ತಿಸಿಕೊಂಡು, ತುಂಬ ನಿಗೂಢವಾದ ಒಬ್ಬಳು ಹುಡುಗಿಯನ್ನು ಸೃಷ್ಟಿಸುವಲ್ಲಿ ಶಕ್ತಳಾಗಿದ್ದಾಳೆ. ಹಾಗೆ ನೋಡಿದರೆ ಆ ಸಿನಿಮಾ ಕೊಂಚ ರಹಸ್ಯಮಯ ಮತ್ತು ಆಹ್ಲಾದಕರ ಎರಡೂ ಆಗಿದೆ" ಎಂದಿದ್ದರು. ನಂತರ ಅವಳು ಅಮಿತಾಭ್ ಬಚ್ಚನ್ ಮತ್ತು ಫರ್ಧೀನ್‌ ಖಾನ್ರೊಂದಿಗೆ ಗೋವಿಂದ್‌ ನಿಹಲಾನಿಯ ಉತ್ತಮ ಸಿನಿಮಾ ಎಂಬ ವಿಮರ್ಶಾ ಮನ್ನಣೆ ಗಳಿಸಿದ ದೇವ್‌‌ ಚಿತ್ರದಲ್ಲಿ ನಟಿಸಿದಳು. ಅದು ಭಾರತದ ಗುಜರಾತ್ ರಾಜ್ಯದಲ್ಲಿ ನಡೆದ ೨೦೦೨ರ ಹಿಂದೂ-ಮುಸ್ಲಿಂ ಗಲಭೆಯ ಕುರಿತ ಚಿತ್ರಣ ಹೊಂದಿತ್ತು. ವಡೋದರದ ಬೆಸ್ಟ್‌ ಬೇಕರಿ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿದ್ದ ಜಾಹಿರಾ ಶೇಕ್‌ ಮೇಲೆ ಚಿತ್ರಿತವಾಗಿದ್ದ ಮುಸ್ಲಿಂ ಹುಡುಗಿ ಆಲಿಯಾಳ ಪಾತ್ರವನ್ನು ಕರೀನಾ ಮಾಡಿದ್ದಳು. ಈ ಪಾತ್ರ ಅವಳಿಗೆ ಅತ್ಯುತ್ತಮ ಅಭಿನಯಕ್ಕೆ ಫಿಲ್ಮ್‌‌ಫೇರ್‌‌ ವಿಮರ್ಶಕರ ಪ್ರಶಸ್ತಿ (ಫಿಲ್ಮ್‌‌ಫೇರ್‌‌ ಕ್ರಿಟಿಕ್ಸ್ ಅವಾರ್ಡ್‌ ಫಾರ್ ಬೆಸ್ಟ್‌ ಪರ್‌ಫಾರ್ಮನ್ಸ್‌) ತಂದುಕೊಟ್ಟಿತು. ಜೊತೆಗೆ ವಿವಿಧ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಅವಳ ಹೆಸರು ನಾಮಕರಣಗೊಂಡಿತ್ತು. ತರಣ್‌ ಆದರ್ಶ್ ಕರೀನಾಳ ಕುರಿತು ಬರೆಯುತ್ತ, "ಕರೀನಾ ಕಪೂರ್ ಮೊದಲದರ್ಜೆಯ ನಟಿ. ಅಷ್ಟೇನೂ ಗ್ಲಾಮರಸ್ ಲುಕ್ ಇಲ್ಲ ಎನ್ನಲಾದ ನಟಿಯು ಈ ಸಿನಿಮಾದಿಂದ ದೊಡ್ಡ ಹೆಜ್ಜೆಯಿಟ್ಟಂತಾಗಿದೆ. ಅಮಿತಾಭ್ ಬಚ್ಚನ್ ಜೊತೆಗೆ ನಟಿಸುವಾಗಿನ ಅವಳ ದೃಶ್ಯ(ಬಚ್ಚನ್ ಅವಳಿಗೆ ಸಾಕ್ಷಿಯಾಗಲು ಮುಂದೆ ಬರುವಂತೆ ಕೇಳುವ ದೃಶ್ಯ) ಅತ್ಯುತ್ತಮ ನಟನೆಗೆ ಒಂದು ಉದಾಹರಣೆಯಾಗಿದೆ." ಎಂದು ವಿಮರ್ಶಿಸಿದ್ದರು. ಇದಾದ ಸ್ವಲ್ಪ ಸಮಯದಲ್ಲಿಯೇ, ಅವಳು ಫಿದಾ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ಮೊದಲ ಬಾರಿಗೆ ಖಳನಾಯಕಿ ಪಾತ್ರವನ್ನು ಮಾಡಿದಳು. ಸಿನಿಮಾವು ಒಂದು ಆನ್‌ಲೈನ್‌ ದರೋಡೆ ಮತ್ತು ಮುಂಬಯಿ ಭೂಗತಜಗತ್ತು ಕುರಿತ ಕಥೆಯನ್ನು ಹೊಂದಿದ್ದು, ಅದರಲ್ಲಿ ಪಾಲ್ಗೊಂಡ ನೇಹಾ ಮೆಹ್ರಾ ಪಾತ್ರವನ್ನು ಕರೀನಾ ಮಾಡಿದ್ದಳು. ಫಿದಾ ಚಿತ್ರೀಕರಣದ ಸಮಯದಲ್ಲಿಯೇ ಅವಳು ನಟ ಶಾಹಿದ್ ಕಪೂರ್‌ ಜೊತೆ ಸಂಬಂಧ ಬೆಳೆಸಿದಳು, ನಂತರ ಆ ಸಂಬಂಧ "ನನ್ನ ಬದುಕಿನಲ್ಲಿ ಮಹತ್ವದ ಧನಾತ್ಮಕ ಪ್ರಭಾವ ಬೀರಿತು" ಎಂದು ವಿವರಿಸಿದ್ದಳು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಯಶಸ್ಸು ಕಾಣದಿದ್ದರೂ, ಕರೀನಾ ಕಪೂರ್ ಅಭಿನಯಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾಯಿತು. ಕೆಲವು ವಿಮರ್ಶಕರು ಅವಳು ಮೊದಲಿನ ಪಾತ್ರಗಳಿಂದ ಭಿನ್ನವಾಗಿ ಪ್ರಗತಿ ಸಾಧಿಸಿರುವುದನ್ನು ಗಮನಿಸಿದರು. ಆ ವರ್ಷ ನಂತರದಲ್ಲಿ ಬಿಡುಗಡೆಯಾದ ಚಿತ್ರಗಳು ಎಂದರೆ ಅಬ್ಬಾಸ್‌-ಮಸ್ತಾನ್‌ರ ಸ್ವಲ್ಪಮಟ್ಟಿಗೆ ಯಶಸ್ಸು ಕಂಡ ಥ್ರಿಲ್ಲರ್ ಸಿನಿಮಾ ಐತ್ರಾಜ್‌ ಮತ್ತು ೨೦೦೨ರ ನಂತರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಅವಳ ಮೊದಲ ಸಿನಿಮಾ, ಪ್ರಿಯದರ್ಶನ್‌ ಅವರ ಹಾಸ್ಯಮಯ ಚಿತ್ರ ಹಲ್‌ಚಲ್‌‌ . ೨೦೦೫ರಲ್ಲಿ, ಅವಳು ಧರ್ಮೇಶ್‌ ದರ್ಶನ್ ನಿರ್ದೇಶಿಸಿದ ಬೇವಫಾ ದಲ್ಲಿ ಮುಖ್ಯಪಾತ್ರಧಾರಿಯಾಗಿದ್ದಳು. ಈ ಸಿನಿಮಾಕ್ಕೆ ನಕಾರಾತ್ಮಕ ವಿಮರ್ಶೆಗಳು ಬಂದವು ಮತ್ತು ವಿಶ್ವಾಸದ್ರೋಹಿ ಹೆಂಡತಿ ಅಂಜಲಿ ಸಹಾಯ್ ಆಗಿ ನಟಿಸಿದ ಕರೀನಾಳ ಅಭಿನಯವನ್ನು ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಲಿಲ್ಲ. ಇಂಡಿಯಾಟೈಮ್ಸ್‌‌ ನ ನಿಖತ್‌ ಖಜ್ಮಿ, ಗಂಭೀರ ನಟಿಯಾಗುವ ಪ್ರಯತ್ನದಲ್ಲಿ, ಬೇವಫಾ ದಲ್ಲಿ ಇನ್ನೂ ತುಂಬ ಹರೆಯದ ಯುವತಿಯಾದ ಕರೀನಾ ತುಂಬ ಪ್ರೌಢವಾದ, ಬಳಲಿದ, ತನಗಿಂತ ಹೆಚ್ಚು ವಯಸ್ಸಾದ ಪಾತ್ರವನ್ನು ಅಭಿನಯಿಸಿದ್ದು ವಿಚಿತ್ರವಾಗಿ ಕಾಣಿಸಿತು ಎಂದು ಅಭಿಪ್ರಾಯಪಟ್ಟರು. ಆ ವರ್ಷದ ಕೊನೆಯಲ್ಲಿ, ಅವಳು ಪ್ರಿಯದರ್ಶನ್‌ ಅವರ ಪ್ರಣಯಭರಿತ ಸಿನಿಮಾ ಕ್ಯೋಂ ಕಿ ಯಲ್ಲಿ ನಟಿಸಿದಳು. ಮಾನಸಿಕ ಆಸ್ಪತ್ರೆಯ ಕಥಾಹಂದರವುಳ್ಳ ಈ ಸಿನಿಮಾ ಮಾನಸಿಕ ರೋಗಿ ಸಲ್ಮಾನ್‌ ಖಾನ್ ಮತ್ತು ಆತನ ವೈದ್ಯೆಯಾಗಿ ಅಭಿನಯಿಸಿದ ಕರೀನಾಳ ಮಧ್ಯೆ ಹುಟ್ಟುವ ಪ್ರೇಮದ ಕುರಿತಾಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು, ಆದರೆ ಕರೀನಾಳ ಅಭಿನಯವನ್ನು ವಿಮರ್ಶಕರು ಮೆಚ್ಚಿಕೊಂಡರು. ಬಿಬಿಸಿ ಯು "ಅಭಿನಯದ ವಿಚಾರಕ್ಕೆ ಬಂದಾಗ ಆಕೆ ಸಹಜವಾಗಿ ಅಭಿನಯಿಸುತ್ತಾಳೆ ಎಂಬುದು ಸುಸ್ಪಷ್ಟ" ಎಂದು ವರದಿ ಮಾಡಿತ್ತು. ಕರೀನಾ ಆಗ ಪ್ರಣಯ ಸನ್ನಿವೇಶವನ್ನು ಅಭಿನಯಿಸಿದ್ದಳು: . ಈ ಚಿತ್ರ ಭಾರತದಲ್ಲಿ ಯಶಸ್ವಿಯಾಗದಿದ್ದರೂ, ಬ್ರಿಟನ್‌ನಲ್ಲಿ ೨೦೦೫ರ ಅತ್ಯಧಿಕ ಹಣಗಳಿಕೆಯ ಬಾಲಿವುಡ್ ಸಿನಿಮಾ ಆಯಿತು. ೨೦೦೬ರಲ್ಲಿ, ಕರೀನಾ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಳು. ಅವಳು ಮೊದಲು ೩೬ ಚೈನಾ ಟೌನ್‌ ಎಂಬ ಥ್ರಿಲ್ಲರ್‌ ಸಿನಿಮಾದಲ್ಲಿ ಅಭಿನಯಿಸಿದಳು, ನಂತರ ಹಾಸ್ಯಮಯ ಚಿತ್ರ ಚುಪ್‌ ಚುಪ್‌ ಕೆ ಯಲ್ಲಿ ಅಭಿನಯಿಸಿದಳು; ಎರಡೂ ಸಿನಿಮಾ ಸಾಕಷ್ಟು ಯಶಸ್ವಿಯಾಯಿತು. ನಂತರ ಅವಳು ವಿಲಿಯಂ ಶೆಕ್ಸ್‌ಪಿಯರ್‌‌‌ನ ಒಥೆಲೋ ದ ಹಿಂದಿ ರೂಪಾಂತರ ಓಂಕಾರ ದಲ್ಲಿ ಡೆಸ್ಡಮೋನ ಪಾತ್ರವನ್ನು ಅಭಿನಯಿಸಿದಳು. ವಿಶಾಲ್ ಭಾರದ್ವಾಜ್‌ ನಿರ್ದೇಶಿದ ಈ ಸಿನಿಮಾ ಲೈಂಗಿಕ ಅಸೂಯೆಗೆ ಪ್ರತಿಯಾಗಿ ಉತ್ತರ ಪ್ರದೇಶದ ರಾಜಕೀಯ ವ್ಯವಸ್ಥೆಯ ಹಿನ್ನೆಲೆಯ ದುರಂತ ಚಿತ್ರಕಥೆಯನ್ನು ಹೊಂದಿತ್ತು. ಈ ಸಿನಿಮಾ ೨೦೦೬ರ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶಿತವಾಯಿತು ಮತ್ತು ಕೈರೋ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿಯೂ ಪ್ರದರ್ಶನಕ್ಕೆ ಆಯ್ಕೆಯಾಯಿತು. ಓಂಕಾರ ಸಿನಿಮಾವು ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಕರೀನಾಳ ಅಭಿನಯವು ಅವಳಿಗೆ ನಾಲ್ಕನೇ ಫಿಲ್ಮ್‌‌ಫೇರ್‌‌ ಪ್ರಶಸ್ತಿಯನ್ನು ತಂದುಕೊಟ್ಟಿತು. ಜೊತೆಗೆ ಮೊದಲನೇ ಸ್ಟಾರ್‌ ಸ್ಕ್ರೀನ್ ಅವಾರ್ಡ್‌ ಕೂಡ ಬಂದಿತು; ನಂತರ ಈ ಚಿತ್ರದಲ್ಲಿ ಅವಳ ಅಭಿನಯವನ್ನು ಫಿಲ್ಮ್‌‌ಫೇರ್‌‌ ೨೦೧೦ರಲ್ಲಿ ಬಿಡುಗಡೆ ಮಾಡಿದ "ಟಾಪ್‌ ೮೦ ಐಕಾನಿಕ್‌ ಅಭಿನಯ"ದ ಪಟ್ಟಿಯಲ್ಲಿ ಸೇರಿಸಿತು. ಕರೀನಾ ಕೂಡ ಓಂಕಾರ ಸಿನಿಮಾದ ತನ್ನ ಪಾತ್ರವು ತನ್ನ ವೃತ್ತಿಬದುಕಿನಲ್ಲಿ "ಒಂದು ಹೊಸ ಮಾನದಂಡ(ಬೆಂಚ್‌ಮಾರ್ಕ್‌)" ಎಂದು ಪರಿಗಣಿಸಿದ್ದಾಳೆ. ಡಾಲಿಯಾಗಿ ತನ್ನ ಪಾತ್ರ ಮತ್ತು ತಾನು ಪ್ರೌಢ ಮಹಿಳೆಯಾಗಿ ಹೊರಹೊಮ್ಮುತ್ತಿರುವುದರ ಮಧ್ಯೆ ಹೋಲಿಕೆ ಮಾಡಿಕೊಂಡಿದ್ದಳು. ಓಂಕಾರ ದ ನಂತರ, ಅವಳು ಅಲ್ಪಕಾಲ ಯಾವ ಚಿತ್ರವನ್ನೂ ಮಾಡಲಿಲ್ಲ, "ಯಾವ ಪಾತ್ರವೂ ಹೂಂ ಎನ್ನುವಷ್ಟು ಸವಾಲಾಗಿಲ್ಲ" ಎಂದು ಭಾವಿಸಿ, ಸುಮ್ಮನಾಗಿದ್ದಳು. ದಿ ಟೈಮ್ಸ್‌ ಆಫ್‌ ಇಂಡಿಯಾ ದ ಸಂದರ್ಶನವೊಂದರಲ್ಲಿ ಕರೀನಾ, "ಉದ್ಯಮದಲ್ಲಿ ನನ್ನ ಆರಂಭಿಕ ವರ್ಷಗಳಲ್ಲಿ, ನನಗಿದ್ದ ದುರಾಸೆಯಿಂದಾಗಿ ನಾನು ತುಂಬ ಕೆಲಸ ಮಾಡುವಂತೆ ನನ್ನನ್ನೇ ಪ್ರೇರೇಪಿಸಿಕೊಂಡಿದ್ದೆ. ಕೇವಲ ಹಣಕ್ಕಾಗಿ ಕೆಲವು ಸಿನಿಮಾ ಮಾಡಿದೆ- ಈಗ ನನಗೆ ಅವುಗಳ ಬಗ್ಗೆ ಪಶ್ಚಾತ್ತಾಪವೆನ್ನಿಸುತ್ತದೆ. ಈಗ ನಾನು ಆಯ್ದ ಸಿನಿಮಾಗಳಲ್ಲಿ ಮಾತ್ರ ನಟಿಸಬಯಸಿರುವೆ" ಎಂದು ವಿವರಿಸಿದ್ದಳು. ನಂತರ ಅವಳು ಈ ಅವಧಿಯನ್ನು "ವಿರಾಮದ ಮತ್ತು ಒತ್ತಡ ಕಡಿಮೆಮಾಡಿಕೊಂಡು ಹಗುರಾಗುವ" ವಿಧಾನ ಎಂದು ವಿವರಿಸಿದ್ದಳು. === ಜಬ್‌ ವಿ ಮೆಟ್‌ ಮತ್ತು ಇನ್ನಿತರ ಸಿನಿಮಾಗಳು (೨೦೦೭–ಪ್ರಸ್ತುತದವರೆಗೆ) === ಕರೀನಾ ನಂತರ ಇಮ್ತಿಯಾಜ್ ಅಲಿ ನಿರ್ದೇಶಿಸಿದ ಪ್ರಣಯದ ಹಾಸ್ಯಮಯ ಚಿತ್ರ, ಜಬ್‌ ವಿ ಮೆಟ್‌ (೨೦೦೭) ಸಿನಿಮಾದಲ್ಲಿ ಬದುಕಿನ ಕುರಿತು ಅದಮ್ಯ ಉತ್ಸಾಹ, ಲವಲವಿಕೆಯುಳ್ಳ ಸಿಖ್‌ ಹುಡುಗಿ, ಸಿನಿಮಾದ ಮುಖ್ಯಪಾತ್ರಧಾರಿ ಗೀತ್‌ ಧಿಲ್ಲೂನ್‌ಳ ಪಾತ್ರದಲ್ಲಿ ನಟಿಸಿದಳು. ಅವಳು ಶಾಹಿದ್ ಕಪೂರ್‌ಗೆ ಎದುರಾಗಿ ನಟಿಸಿದ್ದ ಈ ಚಿತ್ರವು ರೈಲಿನಲ್ಲಿ ಭೇಟಿಯಾಗುವ ಪರಸ್ಪರ ವೈರುದ್ಧ ವ್ಯಕ್ತಿತ್ವಗಳ ಇಬ್ಬರು ವ್ಯಕ್ತಿಗಳು, ನಿಧಾನವಾಗಿ ಪ್ರೀತಿಸುವ ಕಥೆಯನ್ನು ಹೊಂದಿತ್ತು. ಸಿನಿಮಾಕ್ಕೆ ವಿಮರ್ಶಕರು ಉತ್ತಮವಾಗಿ ಪ್ರತಿಕ್ರಿಯಿಸಿದರು ಮತ್ತು ಅದು ವರ್ಷದ ಅತ್ಯಂತ ಯಶಸ್ವೀ ಸಿನಿಮಾ ಆಯಿತು. ದೇಶಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ೩೦೩ ದಶಲಕ್ಷ ರೂ. ಗಳಿಸಿತು (೬.೫೮ ದಶಲಕ್ಷ ಅಮೆರಿಕನ್ ಡಾಲರ್‌) ₹೩೦೩ ದಶಲಕ್ಷ (ಯುಎಸ್$]೬.೭೩ ದಶಲಕ್ಷ). ಅವಳು ಈ ಸಿನಿಮಾದ ಅಭಿನಯಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ತನ್ನ ಎರಡನೇ ಅತ್ಯುತ್ತಮ ನಟಿ ಸ್ಟಾರ್‌ ಸ್ಕ್ರೀನ್ ಅವಾರ್ಡ್‌ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದಳು. ಸಿಎನ್‌ಎನ್‌-ಐಬಿಎನ್‌‌ ನ ರಾಜೀವ್‌ ಮಸಂಡ್‌ ಹೀಗೆ ಬರೆದಿದ್ದರು, "ಒಂದಿಷ್ಟೂ ಹಿಂಜರಿಕೆಯಿಲ್ಲದೆ, ಸ್ವಯಂಸ್ಫೂರ್ತಿಯಿಂದ ನಟಿಸುವ ಕರೀನಾ ಕಪೂರ್ ಈ ಸಿನಿಮಾದ ಆತ್ಮ, ಬಹುದೊಡ್ಡ ಶಕ್ತಿಯಾಗಿದ್ದಾಳೆ. ತನ್ನ ಪಾತ್ರಕ್ಕೆ ಜೀವತುಂಬುವಲ್ಲಿ ಕೇವಲ ಸೌಂದರ್ಯ ಮಾತ್ರವಲ್ಲ, ಸಹಜಾಭಿನಯದ ಕಲಾತ್ಮಕ ಅಭಿವ್ಯಕ್ತಿಯನ್ನು ತುಂಬಿದಂತಿದೆ" ಎಂದು ವರ್ಣಿಸಿದ್ದಾರೆ. ಜಬ್‌ ವಿ ಮೆಟ್‌ ಸಿನಿಮಾದ ಶೂಟಿಂಗ್‌ ನಡೆಯುವಾಗ, ಕರೀನಾ ಮತ್ತು ಶಾಹಿದ್ ತಮ್ಮ ಮೂರು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದರು. ಸಾಕಷ್ಟು ಪ್ರಚಾರ ಪಡೆದ ಈ ಕೊನೆಗೊಂಡ ಸಂಬಂಧದ ಕುರಿತು ಮುಂಬಯಿ ಮಿರರ್‌‌ ನಲ್ಲಿ ಕೇಳಿದಾಗ, "ನನಗೆ ಆತನ ಕುರಿತು ಗೌರವವಿದೆ. ಮುಂದೊಂದು ದಿನ ನಾವು ಒಳ್ಳೆಯ ಗೆಳೆಯರಾಗುತ್ತೇವೆ ಎಂಬ ಭರವಸೆ ಇದೆ. ಆತ ತುಂಬ ಒಳ್ಳೆಯ ಹುಡುಗ." ಎಂದು ಹೇಳಿದ್ದಳು. ಈ ಸಮಯದಲ್ಲಿಯೇ ಅವಳು, ತಾಶನ್‌‌ (೨೦೦೮) ಸಿನಿಮಾದಲ್ಲಿ ಸಹನಟನಾಗಿದ್ದ ನಟ ಸೈಫ್‌ ಅಲಿ ಖಾನ್‌ ಜೊತೆಗೆ ಡೇಟಿಂಗ್ ಮಾಡುವ ಕುರಿತ ಗಾಳಿಸುದ್ದಿಗಳು ಹಬ್ಬಿದ್ದವು. ೨೦೦೭ರ ಅಕ್ಟೋಬರ್‌‌ ೧೮ರಂದು, ಮನೀಶ್‌ ಮಲ್ಹೋತ್ರಾರ ಲ್ಯಾಕ್ಮೆ ಫ್ಯಾಶನ್ ಸಪ್ತಾಹ ದ ಗ್ರಾಂಡ್‌ ಫೈನಲ್‌ ಶೋನಲ್ಲಿ ಖಾನ್ ತಮ್ಮಿಬ್ಬರ ಸಂಬಂಧದ ಕುರಿತು ಮಾಧ್ಯಮಕ್ಕೆ ಖಾತ್ರಿಪಡಿಸಿದರು. ೨೦೦೮ರಲ್ಲಿ, ಅವಳು ಅಕ್ಷಯ್‌ ಕುಮಾರ್, ಸೈಫ್‌ ಅಲಿ ಖಾನ್‌ ಮತ್ತು ಅನಿಲ್‌ ಕಪೂರ್‌‌ ಅವರೊಂದಿಗೆ ವಿಜಯ್‌ ಕೃಷ್ಣಾ ಅವರ ಆಕ್ಷನ್‌-ಥ್ರಿಲ್ಲರ್ ಸಿನಿಮಾ ತಾಶನ್‌ ದಲ್ಲಿ ನಟಿಸಿದಳು. ಬಾಲಿವುಡ್ ಹಂಗಾಮ ಆಯೋಜಿಸಿದ ಜನಮತ ಸಮೀಕ್ಷೆಯು ಇದು ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆಂದು ಹೆಸರಿಸಿತ್ತಾದರೂ, ಈ ಸಿನಿಮಾ ವಾಣಿಕ್ಯಜವಾಗಿ ಮತ್ತು ವಿಮರ್ಶಾತ್ಮಕವಾಗಿ ಸೋತುಹೋಯಿತು. ಅವಳು ನಂತರ ಯಶ್ ರಾಜ್ ಫಿಲ್ಮ್ಸ್ ಮತ್ತು ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ನ ಅನಿಮೇಟೆಡ್ ಸಿನಿಮಾ ರೋಡ್‌ಸೈಡ್ ರೋಮಿಯ ದಲ್ಲಿ ರೋಮಿಯೋ ಎಂಬ ಬೀದಿ ನಾಯಿಯ ಪ್ರೇಮಿಯಾದ ಲೈಲಾ ಎಂಬ ನಾಯಿಯ ಪಾತ್ರಕ್ಕೆ ಧ್ವನಿ ನೀಡಿದ್ದಳು. ಹಾಲಿವುಡ್‌‌ ಸ್ಟುಡಿಯೋ ಒಂದರಿಂದ ಉತ್ತರ ಅಮೆರಿಕದಲ್ಲಿ ಬಿಡುಗಡೆಯಾದ ಎರಡನೇ ಬಾಲಿವುಡ್ ಸಿನಿಮಾ ಇದು. ಈ ಪಾತ್ರಕ್ಕೆ ತಯಾರಾಗಲು, ಕರೀನಾ ಹಲವಾರು ಹಾಲಿವುಡ್‌‌ ಅನಿಮೇಟೆಡ್ ಸಿನಿಮಾಗಳನ್ನು ನೋಡಿ, ಅಲ್ಲಿಯ ನಟರು ಹೇಗೆ ತಮ್ಮ ಸಂಭಾಷಣೆಗಳನ್ನು ಹೇಳುತ್ತಾರೆ ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದಳು. ಕರೀನಾ ನಂತರ ರೋಹಿತ್ ಶೆಟ್ಟಿಯ ಗೋಲಮಾಲ್ ರಿಟರ್ನ್ಸ್ ಹಾಸ್ಯಮಯ ಚಿತ್ರದಲ್ಲಿ ನಟಿಸಿದಳು, ಇದು ೨೦೦೬ರ ಗೋಲಮಾಲ್ ನ ನಂತರದ ಭಾಗವಾಗಿತ್ತು. ಅಜಯ್ ದೇವ್‌ಗನ್, ಅರ್ಷದ್‌ ವಾರ್ಸಿ ಮತ್ತು ತುಷಾರ್ ಕಪೂರ್, ಹೀಗೆ ಬಹುತಾರಾಗಣವಿದ್ದ ಈ ಚಿತ್ರದಲ್ಲಿ ಕರೀನಾ ಗಂಡ ವಿಶ್ವಾಸದ್ರೋಹಿ ಎಂದು ನಂಬಿದ ಅವಿಶ್ವಾಸಿ ಹೆಂಡತಿಯ ಪಾತ್ರ ಮಾಡಿದ್ದಳು. ಈ ಚಿತ್ರಕ್ಕೆ ವಿಮರ್ಶಕರಿಂದ ಉಭಯರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು ಮತ್ತು ಕರೀನಾಗೂ ಮಿಶ್ರರೀತಿಯ ವಿಮರ್ಶೆ ದೊರೆಯಿತು. ಇಂಡಿಯನ್‌ ಎಕ್ಸ್‌ಪ್ರೆಸ್‌ ಈ ಚಿತ್ರಕತೆ ಅಸಲಿಯಲ್ಲ ಎಂದು ಅಭಿಪ್ರಾಯಪಟ್ಟು, "ಸಂದೇಹಾಸ್ಪದ ಹೆಂಡತಿ ತನ್ನ ಗಂಡನ ಮೇಲೆ ಕಣ್ಣಿಡುವುದರಲ್ಲಿ ಏನೂ ಹೊಸತನವಿಲ್ಲ ಮತ್ತು ಕರೀನಾ ಅದನ್ನು ನಿಭಾಯಿಸಿದ ರೀತಿಯಲ್ಲಿಯೂ ಏನೂ ಹೊಸತನವಿಲ್ಲ" ಎಂದು ಬರೆದಿತ್ತು. ಆದರೆ ಗೋಲ್‌ಮಾಲ್‌ ರಿಟರ್ನ್ಸ್ ಗಲ್ಲಾಪೆಟ್ಟಿಗೆಯಲ್ಲಿ ಅಂತರಾಷ್ಟ್ರೀಯ ಗಳಿಕೆಯೂ ಸೇರಿ ೭೯೩ ದಶಲಕ್ಷ ರೂ.(೧೭.೨೧ ದಶಲಕ್ಷ ಅಮೆರಿಕನ್ ಡಾಲರ್‌) ₹೭೯೩ ದಶಲಕ್ಷ (ಯುಎಸ್$]೧೭.೬ ದಶಲಕ್ಷ) ಆದಾಯ ಗಳಿಸಿತು. ಇದರ ನಂತರದ ವರ್ಷ, ಕರೀನಾ ಶಬ್ಬೀರ್‌ ಖಾನ್ ಅವರ ಪುರುಷ-ಸ್ತ್ರೀ ಮಧ್ಯದ ಸಂಘರ್ಷದ ವಿಷಯವುಳ್ಳ ಕಂಬಖ್ತ್‌ ಇಷ್ಕ್‌ ಹಾಸ್ಯಚಿತ್ರದಲ್ಲಿ ಅಕ್ಷಯ್‌ ಕುಮಾರ್ಗೆ ಎದುರಾಗಿ ಸುಮಿತ್ರಾ ರಾಯ್ ಪಾತ್ರದಲ್ಲಿ ನಟಿಸಿದಳು. ಲಾಸ್‌ ಎಂಜಲೀಸ್‌, ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಈ ಕಥೆ, ಕ್ಯಾಲಿಫೋರ್ನಿಯಾದ ಯುನಿವರ್ಸಲ್‌ ಸ್ಟುಡಿಯೋಸ್‌ ಹಾಲಿವುಡ್‌‌ನ ಒಳಗೆ ಚಿತ್ರೀಕರಣಗೊಂಡ ಮೊಟ್ಟಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೆಲವು ಕಿರು ದೃಶ್ಯಗಳಲ್ಲಿ ಹಾಲಿವುಡ್‌‌ ನಟರೂ ಅಭಿನಯಿಸಿದರು. ವಿಶ್ವಾದ್ಯಂತ ಈ ಸಿನಿಮಾ ಚೆನ್ನಾಗಿ ಹಣ ಗಳಿಸಿತು,₹೮೪೦ ದಶಲಕ್ಷ (ಯುಎಸ್$]೧೮.೬೫ ದಶಲಕ್ಷ) ಆದರೆ ಉತ್ತಮ ವಿಮರ್ಶೆ ಗಳಿಸುವಲ್ಲಿ ವಿಫಲವಾಯಿತು. ದಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯು ಅವಳ ಅಭಿನಯ "ಪೂರ್ಣ ನೆಲ ಕಚ್ಚಿದೆ" ಎಂದು ವರ್ಣಿಸಿತು. "ಉತ್ತಮ ಫ್ಯಾಷನ್ನಿನ ಉಡುಗೆಗಳು, ಮೈಕ್ರೋ ಮಿನಿ ಉಡುಪುಗಳು, ಪೆನ್ಸಿಲ್ ಹೀಲ್ಸ್‌ನ ಚಪ್ಪಲಿಗಳು, ಈ ಎಲ್ಲದರಿಂದ ವೈದ್ಯೆ ಮತ್ತು ಸೂಪರ್‌ಮಾಡೆಲ್ ಎರಡೂ ಆಗಿದ್ದು, ಪಾತ್ರವನ್ನು ಮನವರಿಕೆ ಮಾಡುವುದಿಲ್ಲ" ಎಂದು ಅದರಲ್ಲಿ ಹೇಳಲಾಗಿತ್ತು. ನಂತರ ಅವಳು ಪ್ರೇಮ್ ಸೋನಿಯ ಮೊದಲ ನಿರ್ದೇಶನದ ಚಿತ್ರ ಮೈ ಔರ್‌ ಮಿಸೆಸ್‌ ಖನ್ನಾ ದಲ್ಲಿ ನಟಿಸಿದಳು. ಕರೀನಾ ಈ ಸಿನಿಮಾದಲ್ಲಿ ಮುಖ್ಯಪಾತ್ರಧಾರಿ ರೈನಾ ಖನ್ನಾ ಆಗಿ ನಟಿಸಿದ್ದಳು, ಇಡೀ ಕುಟುಂಬದಲ್ಲಿ ದುಡಿಯುವ ಒಬ್ಬಳೇ ಮಹಿಳೆಯಾಗಿದ್ದರಿಂದ ಮದುವೆಗಾಗಿ ಪರಿಪಾಟಲು ಪಡುವ ಮಹಿಳೆಯ ಪಾತ್ರ ಅದಾಗಿತ್ತು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಕವಾಗಿ ಯಶಸ್ವಿಯಾಗಲಿಲ್ಲ. ಡೈಲಿ ನ್ಯೂಸ್ ಆಂಡ್ ಅನಾಲಿಸಿಸ್ ಪತ್ರಿಕೆಯು "ಈ ಚಿತ್ರದಲ್ಲಿ ಕರೀನಾ ಅಲ್ಲಲ್ಲಿ ಪ್ರತಿಭೆಯನ್ನು ತೋರಿಸಿದ್ದಾಳೆ, ಆದರೆ ಮೂರ್ಖತನದ ಕುಡಿಯುವ ದೃಶ್ಯದಲ್ಲಿ ಅಥವಾ ಭಾವನಾತ್ಮಕ ಕ್ಷಣಗಳಲ್ಲಿ ಸುಮ್ಮನೆ ಸುಂದರವಾಗಿ ನಗುವ ಮೂಲಕ ಅಭಿನಯದಲ್ಲಿ ಕುಸಿಯುತ್ತಾಳೆ" ಎಂದು ವಿಶ್ಲೇಷಿಸಿತ್ತು. ಮೈ ಔರ್‌ ಮಿಸೆಸ್‌ ಖನ್ನಾ ಸಿನಿಮಾದ ನಂತರ ಕರೀನಾಳ ಮುಂದಿನ ಸಿನಿಮಾ, ಕುರ್ಬಾನ್‌ , ಈ ನಾಟಕೀಯ ಥ್ರಿಲ್ಲರ್‌ ಸಿನಿಮಾವು ಜಾಗತಿಕ ಭಯೋತ್ಪಾದನೆ ಹಿನ್ನೆಲೆಯನ್ನು ಹೊಂದಿತ್ತು. ಇದನ್ನು ರೆನ್ಸಿಲ್ ಡಿಸಿಲ್ವಾ ನಿರ್ದೇಶಿಸಿದ್ದರು ಮತ್ತು ಕರಣ್‌ ಜೋಹರ್‌ ಚಿತ್ರಕಥೆ ಬರೆದಿದ್ದರು. ಸೈಫ್‌ ಅಲಿ ಖಾನ್‌, ವಿವೇಕ್ ಒಬೆರಾಯ್‌‌, ಓಂಪುರಿ ಮತ್ತು ಕಿರಣ್‌ ಖೇರ್‌ ಸಹನಟರಾಗಿದ್ದರು. ಕರೀನಾ ಇದರಲ್ಲಿ ಗಂಡ ಭಯೋತ್ಪಾದಕ ಎಂದು ಗೊತ್ತಾದ ನಂತರ ಗೃಹಬಂಧನಕ್ಕೊಳಗಾದ ಆವಂತಿಕಾ ಆಹುಜಾ ಎಂಬ ಮಹಿಳೆಯ ಪಾತ್ರವನ್ನು ಮಾಡಿದ್ದಳು. "ಈ ಸಿನಿಮಾ ಭಾವನಾತ್ಮಕವಾಗಿ ತುಂಬ ಕಾಡುವ ಅನುಭವವಾಗಿತ್ತು" ಎಂದು ವರ್ಣಿಸಿದ ಅವಳು ಆ ಪಾತ್ರ ಶೂಟಿಂಗ್ ಸಮಯದಲ್ಲಿ ತನ್ನಿಂದ ಬೇರೆಯಾಗಿರಲೇ ಇಲ್ಲ ಎಂದಿದ್ದಳು. ಚಿತ್ರ ಬಿಡುಗಡೆಗೊಂಡ ನಂತರ ಕರೀನಾಳಿಗೆ ಉತ್ತಮ ವಿಮರ್ಶೆ ದೊರೆಯಿತು ಮತ್ತು ಅವಳು ನಾಲ್ಕನೇ ಬಾರಿ ಫಿಲ್ಮ್‌‌ಫೇರ್‌‌ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಕರಣಗೊಂಡಳು. ಸುಭಾಷ್‌ ಕೆ ಝಾ ಪ್ರಕಾರ "ಕುರ್ಬಾನ್‌ ಪೂರ್ಣವಾಗಿ ಕರೀನಾ ಕಪೂರ್‌ಗೇ ಸೇರಿದ್ದು. ಇದು ಈವರೆಗಿನ ಅವಳ ಎಲ್ಲ ಚಿತ್ರಗಳಲ್ಲಿ ಸಮತೂಕದ ಅಭಿನಯವಾಗಿದ್ದು, ವಿಶ್ವಾಸದ್ರೋಹದ ಪತ್ನಿಯ ಪಾತ್ರಕ್ಕೆ ಜೀವ ತುಂಬುವಲ್ಲಿ ಅವಳು ಎಲ್ಲ ಕ್ಷಣಗಳಲ್ಲಿ ಅದ್ಭುತ ಸಂವೇದನಾಶೀಲತೆಯಿಂದ ನಟಿಸಿದ್ದಾಳೆ. ತನ್ನ ಮೋಹಕ ಸೌಂದರ್ಯದೊಂದಿಗೆ ಆಕರ್ಷಕ ವ್ಯಕ್ತಿತ್ವ ಮತ್ತು ಅಭಿನಯವನ್ನು ಮೇಳೈಸಿಕೊಂಡಿದ್ದಾಳೆ. ತನ್ನ ಅತ್ಯುತ್ತಮ ಅಭಿನಯದಲ್ಲಿ, ಕರೀನಾ ಯಾರೊಂದಿಗೂ ಹೋಲಿಸಲಾಗದವಳು. ಅದನ್ನು ಅವಳು ಕುರ್ಬಾನ್‌‌ ಸಿನಿಮಾದಲ್ಲಿ ರುಜುವಾತು ಪಡಿಸಿದ್ದಾಳೆ". ೨೦೦೯ರ ಅವಳ ಕೊನೆಯ ಸಿನಿಮಾ ಎಂದರೆ ರಾಜ್‌ಕುಮಾರ್‌ ಹಿರಾನಿಯ ೩ ಈಡಿಯೆಟ್ಸ್‌ , ಇದು ಚೇತನ್‌ ಭಗತ್‌ ಅವರ ಕಾದಂಬರಿ ಫೈವ್‌ ಪಾಯಿಂಟ್ ಸಮ್‌ಒನ್‌ ಮೇಲೆ ಸ್ವಲ್ಪಮಟ್ಟಿಗೆ ಆಧಾರಿತವಾದ ಸಿನಿಮಾ. ಅಮೀರ್‌ ಖಾನ್, ಆರ್‌. ಮಾಧವನ್ ಮತ್ತು ಶರ್ಮಾನ್‌ ಜೋಷಿ, ಈ ಮೂವರು ಸಹನಟರೊಂದಿಗೆ ಕರೀನಾ ಸ್ವತಂತ್ರ ಮನೋಭಾವದ ವೈದ್ಯಕೀಯ ವಿದ್ಯಾರ್ಥಿ ಮತ್ತು ಅಮೀರ್‌ ಖಾನ್‌ನ ಪ್ರೇಮಿಯಾಗಿ ಅಭಿನಯಿಸಿದ್ದಳು. ಖಾನ್‌ ಜೊತೆಗೆ ಅಭಿನಯಿಸುವ ಕುರಿತು ಹೇಳುತ್ತ, "ಇದು ಕನಸೊಂದು ನನಸಾದಂತೆ" ಮತ್ತು ನಟಿಯಾಗಿ ನನ್ನ ಪಯಣ "ಅಂತಿಮವಾಗಿ ಪೂರ್ಣಗೊಂಡಂತೆ" ಅನ್ನಿಸುತ್ತಿದೆ ಎಂದಿದ್ದಳು. ಈ ಸಿನಿಮಾ ಅತ್ಯುತ್ತಮ ವಿಮರ್ಶೆ ಗಳಿಸಿತು ಮತ್ತು ಸಾರ್ವಕಾಲಿಕ ಅತ್ಯಧಿಕ ಗಳಿಕೆಯ ಬಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಯಿತು, ಒಟ್ಟು ₹೨,೦೨೬ ದಶಲಕ್ಷ (ಯುಎಸ್$]೪೪.೯೮ ದಶಲಕ್ಷ) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ೨,೦೨೬ ದಶಲಕ್ಷ ಹಣ ಗಳಿಸಿತು. ಅದು ಅಂತಾರಾಷ್ಟ್ರೀಯವಾಗಿ ಕೂಡ ಚೆನ್ನಾಗಿ ಹಣ ಮಾಡಿತು₹೬೯೦ ದಶಲಕ್ಷ (ಯುಎಸ್$]೧೫.೩೨ ದಶಲಕ್ಷ) ಮತ್ತು ೬೯೦ ದಶಲಕ್ಷ ರೂ. (೧೪.೯೭ ದಶಲಕ್ಷ ಅಮೆರಿಕನ್ ಡಾಲರ್‌) ಹಣಗಳಿಸಿತು. ಇದು ವಿದೇಶೀ ಮಾರುಕಟ್ಟೆಯಲ್ಲಿ ಅತಿಹೆಚ್ಚು ಯಶಸ್ವಿಯಾದ ಸಾರ್ವಕಾಲಿಕ ಬಾಲಿವುಡ್ ಸಿನಿಮಾಗಳಲ್ಲಿ ಎರಡನೆಯದು. ರೆಡಿಫ್‌.ಕಾಮ್‌ "ಕರೀನಾಳು ಚಿಕ್ಕ ಪಾತ್ರದಲ್ಲಿಯೇ ಮಿಂಚಿದ್ದಾಳೆ. ಅಲ್ಲಲ್ಲಿ ಅವಳ ಸತ್ವಪೂರ್ಣ ದೃಶ್ಯಗಳು ಜಬ್‌ ವಿ ಮೆಟ್‌ ಧ್ವನಿಯನ್ನೇ ಹೋಲುವಂತಿದ್ದರೂ, ಅವಳು ತೆರೆಯ ಮೇಲೆ ಇದ್ದಾಗ ಸುತ್ತಲೂ ಮಿಂಚುಹರಿಸುವಲ್ಲಿ ಯಶಸ್ವಿಯಾಗಿದ್ದಾಳೆ." ಎಂದು ಅಭಿಪ್ರಾಯಪಟ್ಟಿತ್ತು. ೫೫ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಸಂದರ್ಭದಲ್ಲಿ, ಕರೀನಾ ತನ್ನ ಅಭಿನಯಕ್ಕಾಗಿ ಇನ್ನೊಂದು ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಕಾರಣಗೊಂಡಿದ್ದಳು. ೨೦೧೦ರಲ್ಲಿ, ಅವಳು ಮಿಲೇಂಗೇ ಮಿಲೇಂಗೇ ಎಂಬ ಪ್ರಣಯಭರಿತ ಹಾಸ್ಯಚಿತ್ರದಲ್ಲಿ ನಟಿಸಿದ್ದಾಳೆ. ಈ ಚಿತ್ರದ ನಿರ್ಮಾಣವನ್ನು ೨೦೦೫ರಿಂದ ಮುಂದೂಡಲಾಗಿತ್ತು. ಈ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆ ದೊರೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಗಳಿಕೆ ಮಾಡಲಿಲ್ಲ. ಇದರಲ್ಲಿ ಕರೀನಾಳ ಪಾತ್ರ ತುಂಬ ಚಿಕ್ಕದಿತ್ತು ಮತ್ತು ಅಷ್ಟೇನೂ ಉತ್ತಮವಾಗಿ ಸ್ವೀಕರಿಸಲಿಲ್ಲ. ನಂತರ ಅವಳು ಕಾಜೋಲ್‌ ಮತ್ತು ಅರ್ಜುನ್‌ ರಾಮ್‌ಪಾಲ್‌ ಅವರೊಂದಿಗೆ ವಿ ಆರ್‌ ಫ್ಯಾಮಿಲಿ ಎಂಬ ೧೯೯೮ರಲ್ಲಿ ಹಾಲಿವುಡ್‌‌ನಲ್ಲಿ ಬಿಡುಗಡೆಗೊಂಡ ಸ್ಟೆಪ್‌ಮಾಮ್‌ ನ ರೂಪಾಂತರವಾದ ಸಿನಿಮಾದಲ್ಲಿ ನಟಿಸಿದಳು. ಈ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳುವ ಮೊದಲು, ಕರೀನಾ "ನಾನು ನನ್ನದೇ ಶೈಲಿಯಲ್ಲಿ ಆ ಪಾತ್ರವನ್ನು ಅಭಿವ್ಯಕ್ತಿಸಲಿಕ್ಕಾಗಿ" ಸ್ಟೆಪ್‌ಮಾಮ್‌ ಸಿನಿಮಾ ನೋಡಲು ಬಯಸುವುದಿಲ್ಲ ಎಂದು ವಿವರಿಸಿದ್ದಳು. ಸಿನಿಮಾಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಆದರೆ ಕರೀನಾಳ ಅಭಿನಯಕ್ಕೆ ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದೆ; ವಿಮರ್ಶಕ ತರಣ್ ಆದರ್ಶ್‌ ಈ ಕುರಿತು ಬರೆಯುತ್ತ, "[...] ಮಲತಾಯಿಯ ಪಾತ್ರವನ್ನು ಕರೀನಾಗೆ ಕೊಟ್ಟಿದ್ದು ಉಚಿತವಾಗಿದೆ, ಏಕೆಂದರೆ ಅತ್ಯಂತ ಪ್ರಭಾವೀ ದೃಶ್ಯಗಳಲ್ಲಿ ಕಾಜೋಲ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲ ಏಕೈಕ ನಟಿ ಆಕೆ, ಏಕೆಂದರೆ ಕರೀನಾ ಸ್ವತಃ ಅತ್ಯಂತ ಶಕ್ತ ನಟಿಯಾಗಿದ್ದಾಳೆ" ಎಂದು ಹೇಳಿದ್ದಾರೆ. ಇದೇ ವೇಳೆ, ದಿ ನ್ಯೂಯಾರ್ಕ್‌ ಟೈಮ್ಸ್‌‌ ಹೀಗೆ ಬರೆದಿತ್ತು: "ಕಪೂರ್‌ [...] ಒಂದು ಪಾತ್ರವನ್ನು ಹೆಚ್ಚಾಗಿ ನಂಬಲಸಾಧ್ಯವಾಗುವಂತೆ, ಅಸಂಭಾವ್ಯ ಎಂಬಂತೆ ನಟಿಸುತ್ತಾಳೆ" ಅವಳು ರೋಹಿತ್ ಶೆಟ್ಟಿಯ ೨೦೦೮ರಲ್ಲಿ ಬಿಡುಗಡೆಯಾದ ಗೋಲ್‌ಮಾಲ್‌ ರಿಟರ್ನ್ಸ್ ನ ನಂತರದ ಸರಣಿಚಿತ್ರ ಗೋಲ್‌ಮಾಲ್‌ ೩ ಹಾಸ್ಯಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದಳು. ಬಹುತೇಕ ಹಿಂದಿನ ಸಿನಿಮಾದ ತಾರಾಗಣವನ್ನು ಹೊಂದಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಮ್ಮಿಶ್ರ ಪ್ರತಿಕ್ರಿಯೆ ದೊರೆಯಿತು. ಆದರೂ ಗೋಲ್‌ಮಾಲ್‌ ಚಿತ್ರಗಳ ಸರಣಿಯಲ್ಲಿ ಅತ್ಯಂತ ಯಶಸ್ವಿಯಾದ ಸಿನಿಮಾ ಆಗಿದ್ದು, ದೇಶೀಯವಾಗಿ ೧,೦೦೦ ದಶಲಕ್ಷ ರೂ. (೨೧.೭ ದಶಲಕ್ಷ ಅಮೆರಿಕನ್ ಡಾಲರ್‌)ಗಳಿಗೂ ಹೆಚ್ಚು₹೧,೦೦೦ ದಶಲಕ್ಷ (ಯುಎಸ್$]೨೨.೨ ದಶಲಕ್ಷ) ಹಣ ಗಳಿಸಿತು. ಮಿಡ್‌ ಡೇ ಪತ್ರಿಕೆಯಲ್ಲಿ ಬಂದ ವಿಮರ್ಶೆಯೊಂದು, ಟಾಮ್‌ಬಾಯ್ ಡಬೂ ಹಾಗೆ ಕರೀನಾಳ ಪಾತ್ರವು "[ಸಿನಿಮಾದ]... ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುವ ... ನಿಜವಾದ ನಾಯಕ..." ಎಂದು ಬರೆದಿತ್ತು. ಕರೀನಾಳು ಅನುಭವ್ ಸಿನ್ಹಾ ಅವರ ಸೈನ್ಸ್‌ ಫಿಕ್ಷನ್‌ (ವಿಜ್ಞಾನ ಕಾಲ್ಪನಿಕಕಥೆ) ರಾ. ಒನ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಅವಳೊಂದಿಗೆ ಶಾರುಕ್ ಖಾನ್‌‌ ಮತ್ತು ಅರ್ಜುನ್‌ ರಾಮ್‌ಪಾಲ್‌ ತಾರಾಗಣದಲ್ಲಿರುವ ಈ ಸಿನಿಮಾ ಭಾರತದಲ್ಲಿ ೨೦೧೦ರ ಮಾರ್ಚ್‌ನಲ್ಲಿ ಚಿತ್ರೀಕರಣ ಆರಂಭಿಸಿತು. ಅವಳು ನಟ ಸೈಫ್‌ ಅಲಿ ಖಾನ್‌ಗೆ ಎದುರಾಗಿ ಶ್ರೀರಾಮ್ ರಾಘವನ್‌ ಅವರ ಏಜೆಂಟ್‌ ವಿನೋದ್‌ ಎಂಬ ಆಕ್ಷನ್‌-ಥ್ರಿಲ್ಲರ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾಳೆ. == ತೆರೆಯ ಹಿಂದಿನ ಕಾರ್ಯಗಳು == === ವೇದಿಕೆ ಪ್ರದರ್ಶನಗಳು === ಕರೀನಾ ೨೦೦೨ರಿಂದ ಹಲವಾರು ವೇದಿಕೆ ಪ್ರದರ್ಶನಗಳಲ್ಲಿ ಮತ್ತು ವಿಶ್ವ ಪ್ರವಾಸಗಳಲ್ಲಿ ಭಾಗವಹಿಸಿದ್ದಾಳೆ. ಅವಳ ಮೊದಲ ವಿಶ್ವ ಪ್ರವಾಸ, ಹಾರ್ಟ್‌ಥ್ರೋಬ್ಸ್‌: ಲಿವ್‌ ಇನ್‌ ಕಾನ್ಸರ್ಟ್‌ ಸಂಯಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೃತಿಕ್‌ ರೋಶನ್‌ , ಕರಿಷ್ಮಾ ಕಪೂರ್‌, ಅರ್ಜುನ್‌ ರಾಮ್‌ಪಾಲ್‌, ಮತ್ತು ಆಫ್ತಾಬ್‌ ಶಿವ್‌ದಾಸನಿ, ಇವರೆಲ್ಲರೊಂದಿಗೆ ಭರ್ಜರಿ ಯಶಸ್ವಿಯಾಯಿತು. ಆ ವರ್ಷದ ಕೊನೆಯಲ್ಲಿ, ಅವಳು ಹಲವಾರು ಬಾಲಿವುಡ್ ತಾರೆಯರೊಂದಿಗೆ ಸೇರಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ಕಿಂಗ್ಸ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ನೌ ಆಂಡ್ ನೆವರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ನಾಲ್ಕು ವರ್ಷಗಳ ನಂತರ, ಕರೀನಾ ರಾಕ್‌ಸ್ಟಾರ್ಸ್‌ ಕಾನ್ಸರ್ಟ್‌ ವಿಶ್ವಪ್ರವಾಸವನ್ನು ಸಲ್ಮಾನ್‌ ಖಾನ್, ಜಯೀದ್‌ ಖಾನ್‌, ಜಾನ್‌ ಅಬ್ರಾಹಂ, ಶಾಹಿದ್‌ ಕಪೂರ್‌, ಇಷಾ ಡಯೋಲ್‌‌ ಮತ್ತು ಮಲ್ಲಿಕಾ ಶೆರಾವತ್‌ರೊಂದಿಗೆ ಸೇರಿ ಕೈಗೊಂಡಿದ್ದಳು. ಈ ಕಾರ್ಯಕ್ರಮವು ಬ್ರಿಟನ್, ಸಂಯಕ್ತ ಸಂಸ್ಥಾನ ಮತ್ತು ಕೆನಡಾಗಳ ೧೯ ನಗರಗಳಲ್ಲಿ ಪ್ರದರ್ಶನ ನೀಡಿತು ಮತ್ತು ಅಪಾರ ಯಶಸ್ಸು ಗಳಿಸಿತು. ೨೦೦೮ರಲ್ಲಿ, ಕರೀನಾಳು ಶಾರುಕ್ ಖಾನ್‌‌ನ ಟೆಂಪಪ್ಟೇಶನ್‌ ರೀಲೋಡೆಡ್‌ ೨೦೦೮ , ಎಂಬ ಹಲವಾರು ದೇಶಗಳಲ್ಲಿ ಪ್ರದರ್ಶಿತವಾದ ಸರಣಿ ಪ್ರದರ್ಶನಗಳಲ್ಲಿ ಭಾಗವಹಿಸಿದಳು. ಈ ಕಾರ್ಯಕ್ರಮದಲ್ಲಿ ಅರ್ಜುನ್‌ ರಾಮ್‌ಪಾಲ್‌, ಕತ್ರೀನಾ ಕೈಫ್‌‌, ಗಣೇಶ್‌ ಹೆಗ್ಡೆ, ಜಾವೇದ್ ಅಲಿ ಮತ್ತು ಅನುಶಾ ದಾಂಡೇಕರ್‌ ಕೂಡ ಭಾಗವಹಿಸಿದ್ದು, ನೆದರ್‌ಲ್ಯಾಂಡ್ಸ್‌‌‌ನ ರೋಟರ್‌ಡಮ್‌ನಲ್ಲಿ ಅಹೊಯ್ ರೋಟರ್‌ಡಮ್‌ ಸ್ಥಳದಲ್ಲಿ ನಡೆಯಿತು. ಹಲವಾರು ತಿಂಗಳ ನಂತರ ಅವಳು ಪುನಾ ಖಾನ್, ರಾಮ್‌ಪಾಲ್ ಮತ್ತು ಕೈಫ್‌ ಜೊತೆ ಸೇರಿ ದುಬೈನ ಫೆಸ್ಟಿವಲ್ ಸಿಟಿ ಅರೀನಾದಲ್ಲಿ ೧೫,೦೦೦ ಪ್ರೇಕ್ಷಕರೆದುರು ಮನಮೋಹಕ ಕಾರ್ಯಕ್ರಮ ನೀಡಿದಳು. === ಮಾನವೀಯತೆಯ ಕಾರ್ಯಗಳು === ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವರ್ಷಗಳಲ್ಲಿ, ಕರೀನಾಳು ವಿವಿಧ ಮಾನವೀಯತೆಯ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಳು. ೨೦೦೩ರ ನವೆಂಬರ್‌ನಲ್ಲಿ, ಕರೀನಾಳು ಯುವ ಶಾಂತಿ ಶೃಂಗ ಕ್ಕಾಗಿ ನಿಧಿ ಕೂಡಿಸಲು ನಡೆದ ಮಾರ್ಕೋ ರಿಚಿ ಈಚ್‌ ಒನ್‌ ರೀಚ್‌ ಒನ್‌ ಬೆನಿಫಿಟ್ ಕಾನ್ಸರ್ಟ್‌ ನಲ್ಲಿ ಪ್ರದರ್ಶನ ನೀಡಿದ್ದಳು. ೨೦೦೫ರಲ್ಲಿ ಇನ್ನಿತರ ಬಾಲಿವುಡ್ ತಾರೆಯರೊಂದಿಗೆ ಸೇರಿ ಹೆಲ್ಪ್‌! ಟೆಲೆಥಾನ್ ಕಾನ್ಸರ್ಟ್‌ ಎಂಬ 2004ರ ಹಿಂದೂ ಮಹಾಸಾಗರದ ಭೂಕಂಪದಲ್ಲಿ ನೊಂದವರಿಗೆ ಹಣ ಕೂಡಿಸಲು ಸಹಾಯ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಆ ವರ್ಷದ ಕೊನೆಯಲ್ಲಿ, ರಾಜಾಸ್ತಾನದ ಮರುಭೂಮಿ ಪ್ರದೇಶಕ್ಕೆ ಭೇಟಿ ನೀಡಿ, ಎನ್‌ಡಿಟಿವಿಯ ಜೈ ಜವಾನ್ ಕಾರ್ಯಕ್ರಮದ ಹೋಳಿ ವಾರಾಂತ್ಯದ ವಿಶೇಷ ಧಾರಾವಾಹಿಯಲ್ಲಿ ಸೈನಿಕರ ನೈತಿಕತೆಯನ್ನು ಹೆಚ್ಚಿಸಲು ಭಾಗವಹಿಸಿದ್ದಳು. ಈ ಕಾರ್ಯಕ್ರಮವು ಮನೋರಂಜನೆ ನೀಡುವವ್ಯಕ್ತಿಗಳು ಮತ್ತು ತಾರೆಯರು ದೂರದ ಪ್ರದೇಶಗಳಲ್ಲಿರುವ ಭಾರತದ ಸೈನ್ಯದಳಗಳನ್ನು ಎನ್‌ಡಿಟಿವಿ ತಂಡದೊಂದಿಗೆ ಭೇಟಿ ನೀಡುವುದನ್ನು ಒಳಗೊಂಡಿತ್ತು. ಇದಾದ ನಂತರದ ವರ್ಷದಲ್ಲಿ, ಕರೀನಾಳು ಪ್ರಿಯಾಂಕಾ ಚೋಪ್ರಾಳೊಂದಿಗೆ ಸೇರಿ, ಕೌನ್‌ ಬನೇಗಾ ಕರೋರ್‌ಪತಿ , (ಇದು ಹು ವಾಂಟ್ಸ್ ಟು ಬಿ ಮಿಲಿಯನೇರ್‌ ನ ಭಾರತೀಯ ಆವೃತ್ತಿ)ಯ ತನ್ನ ಅರ್ಧಪಾಲು ಹಣವನ್ನು ದಾನ ಮಾಡಿದಳು₹೫೦,೦೦,೦೦೦ (ಯುಎಸ್$೧,೧೧,೦೦೦). ಅವಳು ಈ ಹಣವನ್ನು ಸೇಂಟ್ ಆಂತೋನಿ ವೃದ್ಧಾಶ್ರಮಕ್ಕೆ ಮತ್ತು ಬಾಂದ್ರಾದ ಮೌಂಟ್‌ಮೇರಿಗೆ ದಾನ ಮಾಡಿದಳು. ೨೦೦೮ರ ಜೂನ್‌ನಲ್ಲಿ, ಕರೀನಾಳು ಕ್ಯಾ ಆಪ್‌ ಪಾಂಚವಿ ಪಾಸ್‌ ಸೆ ತೇಜ್‌ ನಹೀಂ? ಎಂಬ ಆಟದ ಕಾರ್ಯಕ್ರಮದಲ್ಲಿ (ಗೇಮ್ ಶೋ) ಕಾಣಿಸಿಕೊಂಡಳು. ಸೈಫ್‌ ಅಲಿ ಖಾನ್‌ ಜೊತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಳು ತಾನು ಗೆದ್ದಿದ್ದರಲ್ಲಿ ಅರ್ಧವನ್ನು₹೫೦,೦೦,೦೦೦ (ಯುಎಸ್$೧,೧೧,೦೦೦)ಸೇಂಟ್‌ ಆಂಥೋನಿ ವೃದ್ಧಾಶ್ರಮಕ್ಕೆ ದಾನ ಮಾಡಿದಳು. ೨೦೦೯ರಲ್ಲಿ ಅವಳು ಮತ್ತೆ ೧೦ ಕಾ ದಮ್‌ ಕಾರ್ಯಕ್ರಮದಲ್ಲಿ ಗೆದ್ದಿದ್ದನ್ನು₹೧೦,೦೦,೦೦೦ (ಯುಎಸ್$೨೨,೨೦೦) ವೃದ್ಧಾಶ್ರಮಕ್ಕೆ ದಾನ ಮಾಡಿದಳು. ೨೦೦೯ರ ಕೊನೆಯಲ್ಲಿ, ಕರೀನಾಳು ಸ್ವಚ್ಛತೆ ಕುರಿತು ಜಾಗೃತಿ ಹುಟ್ಟಿಸುವ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್‌ (ಬಿಎಂಸಿ) ಪ್ರಯತ್ನಗಳಲ್ಲಿ ಭಾಗಿಯಾದಳು. ಈ ಯೋಜನೆಯು ನೆಹರೂನಗರದ ಅಂಗಡಿಕಾರರು ಮತ್ತು ನಿವಾಸಿಗಳೊಂದಿಗೆ ಸಂವಾದ ಮಾಡುವುದಕ್ಕೆ ಜವಾಬ್ದಾರರಾದ ಮತ್ತು ತ್ಯಾಜ್ಯ ಸಂಗ್ರಹಣೆಗೆ ಮನೆಬಾಗಿಲಿನವರೆಗೆ ಆಂದೋಲನವನ್ನು ಬೆಂಬಲಿಸುವ ಒಂದಿಷ್ಟು ಜನರ ಗುಂಪನ್ನು ಹೊಂದಿತ್ತು. ಇದಾದ ಮರುವರ್ಷ, ಕರೀನಾಳು ಎನ್‌ಡಿಟಿವಿ ಗ್ರೀನ್‌ಥಾನ್‌ ನಲ್ಲಿ ಭಾಗವಹಿಸಿದ್ದಳು. ಆ ಕಾರ್ಯಕ್ರಮದಡಿಯಲ್ಲಿ ಅವಳು ಮಧ್ಯ ಪ್ರದೇಶದ ಚಂದೇರಿ ಗ್ರಾಮವನ್ನು ದತ್ತು ತೆಗೆದುಕೊಂಡು, ಅವರಿಗೆ ವಿದ್ಯುತ್‌ಶಕ್ತಿ ಒದಗಿಸುವುದಕ್ಕೆ ಸಹಾಯ ಮಾಡಿದ್ದಳು. ಅಲ್ಲಿ ಇದರೊಂದಿಗೆ ಅವಳು ಪರಿಸರದ ಹಸಿರು ಭವಿಷ್ಯವನ್ನು ಹುಟ್ಟುಹಾಕುವ ಕುರಿತು ಜಾಗೃತಿ ಉಂಟುಮಾಡಿದಳು. "ನೀವು ಒಂದು ಸ್ವಚ್ಛ, [ಮತ್ತು] ಆರೋಗ್ಯಕರ ಪರಿಸರದಲ್ಲಿ ಜೀವಿಸಬಯಸಿದ್ದೀರಿ ಮತ್ತು ವಿಶೇಷವಾಗಿ ಈಗ ಪ್ರತಿಯೊಂದೂ ಸಮಾಜವನ್ನು ತುಂಬಾ ಪ್ರಭಾವಿಸುತ್ತದೆ. ನಟರು ಜನರು ಕೇಳಬಲ್ಲ ಧ್ವನಿಯನ್ನು ಹೊಂದಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಪ್ರಿಯಾಂಕಾ [ಚೋಪ್ರಾ] ಬ್ರಾಂಡ್‌ ರಾಯಭಾರಿಯಾಗುವ ಆರಂಭ ಮಾಡಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. ನಮ್ಮ ಧ್ವನಿಯನ್ನು ಕೇಳುವಾಗ, ನಾವು ಅದನ್ನು ಬಳಸಿಕೊಳ್ಳಬೇಕು ಮತ್ತು ನಾವೆಲ್ಲರೂ ಈ ಅರಿವನ್ನು ಹರಡುತ್ತಿದ್ದೇವೆ ಎಂದು ನನಗೆ ನಿಜಕ್ಕೂ ಆನಂದವಾಗಿದೆ." ಎಂದು ಆ ಸಂದರ್ಭದಲ್ಲಿ ಆಕೆ ಹೇಳಿದ್ದಳು. === ಉಡುಪುಗಳ ಶ್ರೇಣಿ === ೨೦೦೭ರ ಆಗಸ್ಟ್‌‌ನಲ್ಲಿ, ಉಡುಪುಗಳ ಸರಣಿ ಗ್ಲೋಬಸ್‌, ಎರಡು ವರ್ಷಗಳ ಒಪ್ಪಂದದ ಮೇರೆಗೆ ಕರೀನಾಳನ್ನು ಸೋಹಾ ಅಲಿ ಖಾನ್‌‌ಳ ಬದಲಿಗೆ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿಕೊಂಡಿತು. ಗ್ಲೋಬಸ್‌ ಸ್ಟೋರ್ರ್ಸ್‌ ಪ್ರೈ. ಲಿ.ನ ಸಿಇಒ ಆಗಿರುವ ವಿನಯ್ ನಾಡಕರ್ಣಿ ನಮ್ಮ ಮಳಿಗೆಗಳಲ್ಲಿ ಬಹು-ಬ್ರಾಂಡ್‌ನ ರಿಟೈಲ್‌ ಸರಣಿಯಿಂದ ಏಕ ಬ್ರಾಂಡ್‌ ಕಾರ್ಯತಂತ್ರಕ್ಕೆ ಸಾಗುವ ಪ್ರಯತ್ನದಲ್ಲಿ ನಾವು ನಮ್ಮ ಹೊಸ ಉದ್ಯಮ ಸಾಹಸಗಳಿಗೆ ಬೇರೆ ರಾಯಭಾರಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆವು ಎಂದು ವಿವರಿಸಿದರು. ಗ್ಲೋಬಸ್‌ನಿಂದ ರಾಯಭಾರಿಯಾಗಿ ನೇಮಕಗೊಂಡಿದ್ದಕ್ಕೆ ಕರೀನಾ ಅಭಿಪ್ರಾಯ ವ್ಯಕ್ತಪಡಿಸುತ್ತ, "ನಾನು ಗ್ಲೋಬಸ್‌ನ ಆಯಾಮವಾಗಲು ಸಂತೋಷಪಡುವೆ[...] ದೇಶಾದ್ಯಂತ ಫ್ಯಾಷನ್ನಿನ ಈ ಹೊಸ ಭಾಷೆಯನ್ನು ಹರಡಲು ನಾನು ಉತ್ಸುಕಳಾಗಿರುವೆ" ಎಂದಿದ್ದಳು. ಅವಳು ರಾಯಭಾರಿಯಾದಾಗಿನಿಂದ, ಮಾರಾಟದಲ್ಲಿ ಶೇ. ೭೫ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ೨೦೦೮ರ ಫೆಬ್ರವರಿಯಲ್ಲಿ, ಕರೀನಾ ಸ್ವಂತ ಉಡುಗೆಗಳ ಶ್ರೇಣಿಯೊಂದನ್ನು ಆರಂಭಿಸುವುದಾಗಿ ಪ್ರಕಟಿಸಿದಳು, ಹೀಗೆ ಪ್ರಯತ್ನ ಮಾಡಿದ ಪ್ರಪ್ರಥಮ ಭಾರತೀಯ ನಟಿ ಆಕೆ. ಆ ಸಂದರ್ಭದಲ್ಲಿ ಮಾತನಾಡುತ್ತ, "ನಾನು ಸದ್ಯದಲ್ಲಿಯೇ ನನ್ನ ಅತ್ಯುತ್ಕೃಷ್ಟ ಶ್ರೇಣಿಯನ್ನು ಆರಂಭಿಸಲಿದ್ದೇನೆ ಮತ್ತು ಜನರು ಇದನ್ನು ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿ ಇದೆ. ನನ್ನ ಉಡುಗೆಗಳ ಶ್ರೇಣಿಯು ನನ್ನ ವೈಯಕ್ತಿಕ ಶೈಲಿಯ ಅಭಿರುಚಿಯ ಪ್ರತಿಬಿಂಬವಾಗಿರುತ್ತದೆ ಮತ್ತು ಅದರ ಮೇಲೆ ನನ್ನ ಲೇಬಲ್ ಇರುತ್ತದೆ. ನನ್ನ ಅಲಂಕಾರದ ಕುರಿತು ನಾನು ಸಾಕಷ್ಟು ಸಾಂದರ್ಭಿಕವಾಗಿರುವಂತೆ, ನನ್ನ ಶ್ರೇಣಿಯು ಕೂಡ ಅತ್ಯಧಿಕವಾಗಿ ತೊಡುವಂತೆ, ಆದರೂ ಸ್ಟೈಲಿಶ್‌ ಸಂಗ್ರಹದಿಂದ ಕೂಡಿರುತ್ತದೆ. ಈ ಶ್ರೇಣಿಯನ್ನು ನಾನು ರಾಯಭಾರಿಯಾಗಿರುವ ಗ್ಲೋಬಸ್‌ ಬ್ರಾಂಡ್‌ನ ಸಹಭಾಗಿತ್ವದಲ್ಲಿ ಹೊರತರಲಿರುವೆ" ಎಂದು ಹೇಳಿದ್ದಳು. ಉಡುಗೆಗಳ ಯೋಜನೆ ಮತ್ತು ವಿನ್ಯಾಸ ಪಕ್ರಿಯೆಯಲ್ಲಿಯೂ ತಾನು ತೊಡಗಿಸಿಕೊಂಡಿರುವುದಾಗಿ ಕರೀನಾ ಹೇಳಿದ್ದಳು. ಕೆಲವು ತಿಂಗಳ ನಂತರ ಅವಳ ಉಡುಗೆಗಳ ಶ್ರೇಣಿಯು ಭಾರತಾದ್ಯಂತ ಮೊದಲಬಾರಿಗೆ ಮಳಿಗೆಗಳಲ್ಲಿ ಕಾಣಿಸಿಕೊಂಡಿತು ಮತ್ತು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ಲೋಬಸ್‌ನೊಂದಿಗೆ ಒಪ್ಪಂದ ಕೊನೆಗೊಂಡ ನಂತರ, ತನ್ನ ಉಡುಗೆಗಳ ಶ್ರೇಣಿಯನ್ನು ಅಂತಾರಾಷ್ಟ್ರೀಯವಾಗಿ ಬಿಡುಗಡೆ ಮಾಡಲು ಫ್ರಾನ್ಸ್‌ನ ಚೇಂಬರ್‌ ಸಿಂಡಿಕೇಲ್‌ ಡೆ ಲಾ ಓಟ್‌ ಕ್ಯುಟೊರ್‌ ಎಂಬ ಅಂತಾರಾಷ್ಟ್ರೀಯ ವಿನ್ಯಾಸ ಕಂಪನಿಯೊಂದಿಗೆ ಕೆಲಸ ಮಾಡುವ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದಳು. ೨೦೧೦ರ ಜನವರಿಯಲ್ಲಿ, "ನಾನು ಕೆಲವು ಯೋಜನೆಗಳನ್ನು ರೂಪಿಸಿರುವೆ [ಮತ್ತು] ನಾನು ಅವುಗಳನ್ನು ಕಾರ್ಯಗತಗೊಳಿಸಬೇಕಿದೆ ಅಷ್ಟೆ". ಎಂದು ವಿವರಿಸಿದಳು, ಆದರೆ ನಂತರ ತನ್ನ ಮೊದಲಿನ ಬದ್ಧತೆಗಳಿಂದಾಗಿ, "ಯೋಜನೆಗಳು[...] ಹಿಂದೆ ಸರಿಯಬೇಕಾಗಿದೆ" ಎಂದು ಹೇಳಿದಳು. == ಮಾಧ್ಯಮಗಳಲ್ಲಿ == ಬಾಲಿವುಡ್ ಸಿನಿಮಾ ಉದ್ಯಮದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದ ಕುಟುಂಬದಿಂದ ಬಂದ ಕರೀನಾಳು ೨೦೦೦ದವರೆಗೆ ಮೊದಲ ಸಿನಿಮಾ ಮಾಡದಿದ್ದರೂ, ತುಂಬ ಚಿಕ್ಕ ವಯಸ್ಸಿನಿಂದಲೇ ಮಾಧ್ಯಮಗಳ ಕಣ್ಣನ್ನು ಸೆಳೆದಿದ್ದಳು. ಚಿಕ್ಕವಳಿದಾಗಿದ್ದಾಗ, ಅವಳು ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಗೆ ನಿಯಮಿತವಾಗಿ ತನ್ನ ತಾಯಿ ಬಬಿತಾ ಮತ್ತು ಅಕ್ಕ ಕರಿಷ್ಮಾ ಕಪೂರ್‌ ಅವರೊಂದಿಗೆ ಬರುತ್ತಿದ್ದಳು ಮತ್ತು ಅಕ್ಕನ ಜೊತೆ ಸಿನಿಮಾ ಸೆಟ್‌ಗಳಲ್ಲಿಯೂ ಹಾಜರಾಗುತ್ತಿದ್ದಳು. ಫಿಲ್ಮ್‌‌ಫೇರ್‌‌ ನಲ್ಲಿ ಬಂದ ಸಂದರ್ಶನವೊಂದರಲ್ಲಿ ಅವಳು ಸಿನಿಮಾ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು ತನ್ನ ಕೆಲಸದ ಕುರಿತು ವೃತ್ತಿಪರತೆಯ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ, ಜೊತೆಗೆ ಮಾನವೀಯ ವ್ಯಕ್ತಿಯಾಗಿ ತಳವೂರಲು ಸಾಧ್ಯವಾಗಿದೆ ಎಂದು ಹೇಳಿದ್ದಳು. ಕರೀನಾಳ ತೆರೆಯ ಹಿಂದಿನ ಬದುಕು, ಅವಳ ತೂಕ ಮತ್ತು ಆಹಾರಕ್ರಮದ ಕುರಿತು ಆಗಾಗ ಬರುವ ಪತ್ರಿಕಾ ವರದಿಗಳೊಂದಿಗೆ ಭಾರತದಲ್ಲಿ ಮಾಧ್ಯಮಗಳ ವ್ಯಾಪಕ ಪ್ರಚಾರ ಪಡೆದಿವೆ. ಅವಳ ಶಾಹಿದ್‌ ಕಪೂರ್‌ ಜೊತೆಗಿನ ಸಂಬಂಧ ಮುರಿದು ಬಿದ್ದಿದ್ದು ಮತ್ತು ನಂತರದಲ್ಲಿ ನಟ ಸೈಫ್‌ ಅಲಿ ಖಾನ್‌ ಜೊತೆಗಿನ ಅವಳ ಸಂಬಂಧದಿಂದಾಗಿ ಹೆಡ್‌ಲೈನ್‌ಗಳಲ್ಲಿ (ತಲೆಬರೆಹಗಳಲ್ಲಿ) ಮಿಂಚಿದಳು. ಹೆಚ್ಚಾಗಿ ಭಾರತದ "ಬ್ರಾಂಗ್ಲಿನಾ" ("ಸೈಫೀನಾ") ಎಂದು ಪತ್ರಿಕೆಗಳಿಂದ ಕರೆಯಲಾದ ಆಕೆಯ ಖಾನ್‌ ಜೊತೆಗಿನ ಸಂಬಂಧವು ೨೦೦೭ರಿಂದ ಭಾರತದಲ್ಲಿ ಅತ್ಯಂತ ಹೆಚ್ಚು ವರದಿಯಾದ ಖ್ಯಾತನಾಮರ(ಸೆಲೆಬ್ರೆಟಿ) ಸುದ್ದಿಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಮಾಧ್ಯಮದ ಊಹಾಪೋಹಳಿಗೆ ಪ್ರತಿಕ್ರಿಯೆಯಾಗಿ, ಕರೀನಾಳು ಮಾಧ್ಯಮದೊಂದಿಗೆ ಮುಚ್ಚುಮರೆಯಿಲ್ಲದ ಬಾಂಧವ್ಯ ಬೆಳೆಸಿಕೊಂಡಿದ್ದಾಳೆ. ಯಾವುದೇ ನಿರ್ಬಂಧಗಳಿಲ್ಲದೆಯೇ ತನ್ನ ವೃತ್ತಿಯ ಅಥವಾ ಖಾಸಗಿ ಬದುಕಿನ ಕುರಿತು ಚರ್ಚಿಸುತ್ತಾಳೆ ಎಂಬ ಹೆಸರು ಪಡೆದಿದ್ದಾಳೆ. ಅವಳ ಅತ್ಯಂತ ಭಿನ್ನ ಶಾರೀರಿಕ ಲಕ್ಷಣಗಳಲ್ಲಿ, ಕರೀನಾಳ ತುಟಿಗಳು ಅವಳ ಟ್ರೇಡ್‌ಮಾರ್ಕ್‌ ಎಂದು ಭಾರತೀಯ ಮಾಧ್ಯಮಗಳು ಉಲ್ಲೇಖಿಸಿವೆ. ಅವಳ ತೆರೆಯ ಹಿಂದಿನ ವ್ಯಕ್ತಿತ್ವ ಕೂಡ ಹೆಚ್ಚು ಚರ್ಚೆ ಮತ್ತು ಟೀಕೆಗಳಿಗೆ ಒಳಗಾಗಿದೆ. ಮಾಧ್ಯಮಗಳ ಒಂದು ವಲಯ ಅವಳನ್ನು ತುಂಬ ಸ್ನೇಹಮಯಿ ಮತ್ತು ತನ್ನ ಕುಟುಂಬಕ್ಕೆ ತುಂಬ ಹತ್ತಿರದಲ್ಲಿರುತ್ತಾಳೆ ಎಂದು ವರ್ಣಿಸಿದ್ದರೆ, ಇನ್ನಿತರರು ಅವಳು ಆಕ್ರಮಣಶೀಲ ಮತ್ತು ದುರಂಹಕಾರದ ಸ್ವಭಾವದವಳು ಎಂದು ವಿವರಿಸುತ್ತಾರೆ. ಅದು ಕಭೀ ಖುಷಿ ಕಭೀ ಗಮ್‌... ಸಿನಿಮಾದಲ್ಲಿ "ಪೂ" ಪಾತ್ರದ ಚಿತ್ರಣದ ನಂತರ ಅವಳು ಪಡೆದ ಇಮೇಜ್‌. (೨೦೦೧). ಅವಳು ನಂತರದಲ್ಲಿ ೨೦೦೨–೦೩ರಲ್ಲಿ ಅಂತಹುದೇ ಪಾತ್ರಗಳನ್ನು ಮಾಡುತ್ತ ಹೋದಳು, ಹೀಗಾಗಿ ನಟಿಯಾಗಿ ತೆರೆಯ ಮೇಲೆ ಮತ್ತು ತೆರೆಯ ಹಿಂದೇ ಅದೇ ಇಮೇಜ್‌ ಬೆಳೆಯಿತು. ಅವಳು ಲೈಂಗಿಕ ಕಾರ್ಯಕರ್ತೆಯ ಪಾತ್ರ ಮಾಡಿದ್ದ ೨೦೦೪ರ ಚಮೇಲಿ ಸಿನಿಮಾ ಬಿಡುಗಡೆಗೆ ಮುನ್ನ, ಕರೀನಾ ಮಾತನಾಡುತ್ತ, "ಜನರು ನಿಮ್ಮನ್ನು ಒಂದು ನಿರ್ದಿಷ್ಟ ಇಮೇಜ್‌ನೊಂದಿಗೆ ಗುರುತಿಸುತ್ತಾರೆ. ನೀವು ಯಾವುದೇ ಪಾತ್ರ ಮಾಡಿದರೂ ಅದು ನಿಮ್ಮನ್ನು ಹಿಂಬಾಲಿಸುತ್ತದೆ. ಈ ಇಮೇಜ್‌ಅನ್ನು ಮೀರಲು ಮತ್ತು ಹೆಚ್ಚೆಚ್ಚು ತೆರೆ-ಸ್ನೇಹಿಯಾಗಲು ನಾನು ಪ್ರಯತ್ನಿಸುತ್ತಿರುವೆ." ಎಂದಿದ್ದಳು. ಅವಳಿಗೆ ತೆರೆಯ ಮೇಲೆ ಹೊಸ ಇಮೇಜ್‌ ದಕ್ಕಿಸಿಕೊಳ್ಳಲು ಸಹಾಯಕವಾದ ಚಮೇಲಿ ಬಿಡುಗಡೆ ನಂತರ, ಕರೀನಾಳಿಗೆ ಅವಳ ತೆರೆಯ-ಹಿಂದಿನ ಇಮೇಜ್‌ ಕುರಿತು ಕೇಳಲಾಗಿತ್ತು. ಸಂದರ್ಶನವೊಂದರಲ್ಲಿ, ಅವಳು ತಾನು ಮಗುವಾಗಿದ್ದಾಗಿನಿಂದಲೂ ಆತ್ಮವಿಶ್ವಾಸದಿಂದಿರುವುದನ್ನು ಕಲಿಸಲಾಗಿತ್ತು, ಆ ಗುಣವನ್ನು ಮಾಧ್ಯಮಗಳು ಆಕ್ರಮಣಶೀಲ ಸ್ವಭಾವ ಎಂದು ತಪ್ಪಾಗಿ ಅರ್ಥೈಸಿದ್ದವು ಎಂದು ವಿವರಿಸಿದ್ದಳು. ೨೦೦೪ರಲ್ಲಿ, ಕರೀನಾಳು ರೆಡಿಫ್‌ನ "ಟಾಪ್‌ ಬಾಲಿವುಡ್ ಫೀಮೇಲ್ ಸ್ಟಾರ್‌"ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಳು. ೨೦೦೫ರಲ್ಲಿ ಏಳನೇ ಸ್ಥಾನ ಮತ್ತು ೨೦೦೬ರಲ್ಲಿ ಐದನೇ ಸ್ಥಾನ ಗಳಿಸಿದ್ದಳು ಮತ್ತು ೨೦೦೭ರಲ್ಲಿ ಪುನಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಳು. ಅವಳು "ಬಾಲಿವುಡ್‌ನ ಅತ್ಯಂತ ಸುಂದರ ನಟಿ", "ಬಾಲಿವುಡ್‌ನ ಅತ್ಯುತ್ತಮ ಉಡುಗೆ ತೊಡುವ ಮಹಿಳೆ" ಮತ್ತು "ಬಹುಮುಖವುಳ್ಳ ಮಹಿಳೆ" ಪಟ್ಟಿಗಳೂ ಸೇರಿದಂತೆ ರೆಡಿಫ್‌ನ ಬೇರೆ ಬೇರೆ ಪಟ್ಟಿಗಳಲ್ಲಿ ಆಗೀಗ ಕಾಣಿಸಿಕೊಳ್ಳುತ್ತಲೇ ಇದ್ದಳು. ೨೦೦೫ರಲ್ಲಿ, ಕರೀನಾ ಕರಣ್‌ ಜೋಹರ್‌ನ ಕಾಫೀ ವಿತ್ ಕರಣ್‌ ಟಾಕ್‌ ಶೋನಲ್ಲಿ ರಾಣಿ ಮುಖರ್ಜಿಯೊಂದಿಗೆ ಮೊದಲ ಬಾರಿ ಕಾಣಿಸಿಕೊಂಡಳು, ನಂತರ ಅವಳು ಶಾಹಿದ್‌ ಕಪೂರ್‌ನೊಂದಿಗೆ ಮತ್ತು ಸೈಫ್‌ ಅಲಿ ಖಾನ್‌ನೊಂದಿಗೆ ಕ್ರಮವಾಗಿ ೨೦೦೭ ಮತ್ತು ೨೦೧೦ರಲ್ಲಿ ಕಾಣಿಸಿಕೊಂಡಿದ್ದಳು. ೨೦೦೬ರಲ್ಲಿ ಅವಳು, ಮನೀಶ್‌ ಮಲ್ಹೋತ್ರಾನ ಫ್ಯಾಷನ್ ವೀಕ್‌ ೨೦೦೬ ರ ಫ್ಯಾಷನ್‌ ಪ್ರದರ್ಶನದಲ್ಲಿ ರೂಪದರ್ಶಿಯಾಗಿ ಮತ್ತು ರನ್‌ವೇ ಕ್ಯಾಟ್‌ವಾಕ್‌ಗೆ ನಟರಾದ ಶಾಹಿದ್ ಕಪೂರ್‌ ಮತ್ತು ಊರ್ಮಿಳಾ ಮಾತೋಂಡ್ಕರ್‌ ಜೊತೆ ಆಯ್ಕೆಯಾಗಿದ್ದಳು. ಮೂರು ವರ್ಷಗಳ ನಂತರ ಅವಳು ೨೦೦೯ ಇಂಡಿಯಾ ಕ್ಯೂಟ್ಯೂರ್ ವೀಕ್‌ (ಭಾರತದ ಫ್ಯಾಷನ್‌ ಉಡುಗೆಗಳ ಸಪ್ತಾಹ) ನಲ್ಲಿ ಮಲ್ಹೋತ್ರಾರ ಡೆಸ್ಟಿನೇಶನ್‌ ವೆಡ್ಡಿಂಗ್ ಎಂದು ಕರೆಯಲಾದ ಮದುಮಗಳ ಸಂಗ್ರಹದ ಪ್ರದರ್ಶನದಲ್ಲಿ ಕ್ಯಾಟ್‌ವಾಕ್‌ ಮಾಡಿದಳು. ಇಂದು ಕರೀನಾಳು ಭಾರತದಲ್ಲಿ ಅತ್ಯಂತ ಜನಪ್ರಿಯ ಬಾಲಿವುಡ್ ಖ್ಯಾತನಾಮರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದ್ದಾಳೆ. ಅವಳ ಆಕರ್ಷಕ ಮೈಮಾಟ ಮತ್ತು ಅಭಿನಯವು ಯುವತಿಯರಲ್ಲಿ ಮತ್ತು ಮಹಿಳೆಯರಲ್ಲಿ ಅವಳನ್ನು ಸ್ಟೈಲ್‌ ಐಕಾನ್‌ ಆಗಿಸಿದೆ. ೨೦೦೯ರಲ್ಲಿ ಡಿಎನ್‌ಎ ಪತ್ರಿಕೆ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವಳು ಭಾರತದ ಅತ್ಯಂತ ಜನಪ್ರಿಯ ಐಕಾನ್‌ಗಳಲ್ಲಿ ಒಬ್ಬಳೆಂದು ಜನ ಮತಹಾಕಿದ್ದರು. ಯುಕೆ ನಿಯತಕಾಲಿಕ ಈಸ್ಟರ್ನ್‌ ಐ ಪ್ರಕಾರ, ೨೦೦೯ರಲ್ಲಿ "ಏಷ್ಯಾದ ಅತ್ಯಂತ ಸೆಕ್ಸೀ ಮಹಿಳೆ" ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಳು; ಅದಕ್ಕಿಂತ ಮೊದಲು ೨೦೦೭ರಲ್ಲಿ ಎಂಟನೆಯ ಸ್ಥಾನ ಮತ್ತು ೨೦೦೮ರಲ್ಲಿ ಮೂರನೆಯ ಸ್ಥಾನ ಪಡೆದಿದ್ದಳು. ಕರೀನಾ ಸಿಎನ್‌ಎನ್‌ಜಿಒ'ಸ್‌ "ಹು ಮ್ಯಾಟರ್ಡ್‌ ಮೋಸ್ಟ್‌ ಇಂಡಿಯಾ" ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಅಭಿನೇತ್ರಿ ಮತ್ತು "ಭಾರತದ ಅತ್ಯಂತ ಸುಂದರ ಮಹಿಳೆ" ಎಂದು ೨೦೧೦ರಲ್ಲಿ ಪೀಪಲ್ ಪತ್ರಿಕೆ ವರ್ಣಿಸಿತ್ತು. ೨೦೧೦ರ ಜುಲೈನಲ್ಲಿ, ಕರೀನಾ ಫಿಲ್ಮ್‌‌ಫೇರ್‌‌ ನಿಯತಕಾಲಿಕದ ವಾರ್ಷಿಕ ಶಕ್ತಿಶಾಲಿ ಮಹಿಳೆ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷದ ಸಾಧನೆಯನ್ನೇ ಮುಂದುವರೆಸಿದ್ದಳು. ೨೦೦೯ರಲ್ಲಿಯೂ ಅವಳು ಹತ್ತನೇ ಸ್ಥಾನದಲ್ಲಿದ್ದಳು. == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು == ಕಪೂರ್ ಹತ್ತು ನಾಮನಿರ್ದೇಶನಗಳಲ್ಲಿ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರಾಶ್ರಿತರ ಪಾತ್ರಕ್ಕಾಗಿ, ಕಪೂರ್ ೨೦೦೦ ರಲ್ಲಿ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಗೆ ಪಾತ್ರರಾದರು. ಅವರು ಚಮೇಲಿ (೨೦೦೩) ಗಾಗಿ ವಿಶೇಷ ತೀರ್ಪುಗಾರರ ಮಾನ್ಯತೆಯನ್ನು ಪಡೆದರು ಮತ್ತು ದೇವ್ (೨೦೦೪) ಮತ್ತು ಓಂಕಾರ (೨೦೦೬) ಗಾಗಿ ಅತ್ಯುತ್ತಮ ನಟಿಗಾಗಿ ಎರಡು ವಿಮರ್ಶಕರ ಪ್ರಶಸ್ತಿ ಪಡೆದರು. ಕಪೂರ್ ನಂತರ ಕ್ರಮವಾಗಿ ಜಬ್ ವಿ ಮೆಟ್ (೨೦೦೭) ಮತ್ತು ವಿ ಆರ್ ಫ್ಯಾಮಿಲಿ (೨೦೧೦) ಚಿತ್ರಕ್ಕಾಗಿ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. == ಗ್ಯಾಲರಿ == == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == == ಬಾಹ್ಯ ಕೊಂಡಿಗಳು ==